ಹುಬ್ಬಳ್ಳಿ: ಸದನದಲ್ಲಿ ಯಾರದೋ ಮಾತು ಕೇಳಿ ಸ್ಪೀಕರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಆಶಿಸ್ತು ಪ್ರದರ್ಶಿಸಿದಾಗ ಕ್ರಮ ಕೈಗೊಳ್ಳುವ ಅಧಿಕಾರವಿದೆ, ಆದರೆ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಪೀಕರ್ ಈ ರೀತಿ ಅಮಾನತು ಮಾಡಿರೋದು ಸರಿಯಲ್ಲ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರ ಭಂಡತನ ತೋರಿದಾಗ ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಸ್ಪೀಕರ್ ತಮ್ಮ ಕಚೇರಿಗೆ ಕರೆಯಿಸಿ ಬುದ್ಧಿ ಹೇಳಿ, ಎಚ್ಚರಿಕೆ ಕೊಡಬಹುದಿತ್ತು. ಆರು ತಿಂಗಳ ಕಾಲ ಅಮಾನತು ಮಾಡಿರೋದು ಅತ್ಯಂತ ಖಂಡನೀಯ.
ಈ ರೀತಿಯ ಘಟನೆ ಹಿಂದೆ ನಡೆದಿರಲಿಲ್ಲ. ಹಿಂದೆ ಸಿದ್ಧರಾಮಯ್ಯ ಸದನದ ಬಾಗಿಲನ್ನೇ ಒದ್ದಿದ್ದರು ದೊಡ್ಡ ರೀತಿಯ ಗೂಂಡಾಗಿರಿ ಮಾಡಿದ್ದರು. ಆಗ ಅವರನ್ನು ಅಮಾನತು ಮಾಡಲಾಗಿತ್ತೇ..? ಮೆದುವಾಗಿ ಪ್ರತಿಭಟನೆ ಮಾಡಿದ್ದಾರೆ. ಪೇಪರ್ ಹರಿದು ಹಾಕೋದು ಈಗ ಕಾಮನ್ ಆಗಿಬಿಟ್ಟಿದೆ . ಸ್ಪೀಕರ್ ಪೀಠಕ್ಕೆ ಹೋಗಿದ್ದರೆ, ದೈಹಿಕವಾಗಿ ಹಲ್ಲೆ ಮಾಡಿದ್ದರೆ ಅಮಾನತ್ತು ಮಾಡಬಹುದಿತ್ತು. ಯಾರದೋ ಮಾತು ಕೇಳಿ ಆರು ತಿಂಗಳು ಅಮಾನತು ಮಾಡಲಾಗಿದೆ. ವಿಧಾನಸಭೆ ಇತಿಹಾಸದಲ್ಲೇ ನಡೆದಿಲ್ಲ ಎಂದರು.
ಸ್ವಯಂ ಪ್ರೇರಣೆಯಿಂದ ಅಮಾನತು ರದ್ದು ಮಾಡಬೇಕು
ಸ್ಪೀಕರ್ ನಡವಳಿಕೆ ಸರಿಯಲ್ಲ. ಒಂದು ದಿನದ ಮಟ್ಟಿಗೆ ಅಮಾನತು ಮಾಡಬಹುದಿತ್ತು. ಯಾವುದೇ ಮೀಟಿಂಗ್ ಗೂ ಹಾಜರಾಗಬಾರದೆಂದೆರೆ ಹೇಗೆ..? ಶಾಸಕರ ಹಕ್ಕುಗಳನ್ನು ಕಿತ್ತುಕೊಂಡಂತೆ. ಕೂಡಲೇ ಅಮಾನತನ್ನು ವಾಪಸ್ ಪಡೆಯಬೇಕು ಎಂದರು.
ಇನ್ನೂ ಹನಿ ಟ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹನಿ ಟ್ರ್ಯಾಪ್ ಇದೊಂದು ಗಂಭೀರ ಪ್ರಕರಣವಾಗಿದೆ. ಜನಪ್ರತಿನಿಧಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಒಬ್ಬ ಮಂತ್ರಿಯೆ ಹನಿ ಟ್ರ್ಯಾಪ್ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. 48 ಜನರ ಸಿಡಿ ಇವೆ ಅಂತಾರೆ. ಸತೀಶ್ ಜಾರಕಿಹೊಳಿ ಅವರು ನೂರಾರು ಜನರ ಸಿಡಿ ಇವೆ ಅಂತ ಹೇಳಿದ್ದಾರೆ. ಬ್ಲಾಕ್ ಮೇಲ್ ಮಾಡೋ ತಂಡಗಳೇ ಇವೆ. ಇದರ ಹಿಂದಿನ ತಂತ್ರ, ಕುತಂತ್ರ ಹೊರ ಬರಬೇಕಿದೆ. ಹೀಗಾಗಿ ಪ್ರಕರಣ ಸಮಗ್ರ ತನಿಖೆ ನಡೆಯಬೇಕಿದೆ. ಸಿಬಿಐ ಕೊಟ್ಟರೆ ಮಾತ್ರ ಸೂಕ್ತ ತನಿಖೆಯಾಗುತ್ತೆ ಇದಕ್ಕೊಂದು ಇತಿಶ್ರೀ ಹಾಡಬೇಕಿದೆ. ಹೀಗಾಗಿ ಇದರ ಹಿಂದಿರೋ ನಿರ್ದೇಶಕರು, ನಿರ್ಮಾಪಕರು ಯಾರೆನ್ನೋದು ಬಹಿರಂಗವಾಗಬೇಕು ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಹಾಗಾದಾಗ ಮಾತ್ರ ಹನಿ ಟ್ರ್ಯಾಪ್ ನಂಥ ಪ್ರಕರಣಕ್ಕೆ ಬ್ರೇಕ್ ಬೀಳುತ್ತೆ ಎಂದು ಹೇಳಿದರು