Top Newsಸುದ್ದಿ

ತಾಜ್​ಮಹಲ್​ಗೆ ಭೇಟಿ ನೀಡಿದ ಮಾಲ್ಡೀವ್ಸ್​ ಅಧ್ಯಕ್ಷ ಮುಯಿಝು: 2 ಗಂಟೆಗಳ ಕಾಲ ಸಾರ್ವಜನಿಕರ ಪ್ರವೇಶ ನಿಷೇಧ

ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಇಂದು ಆಗ್ರಾದಲ್ಲಿರುವ ತಾಜ್​ಮಹಲ್​ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಎರಡು ಗಂಟೆಗಳ ಕಾಲ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ. ಆಗ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ, ಮುಯಿಝು ಮತ್ತು ಅವರ ಪತ್ನಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರವಾಗಿ ರಾಜ್ಯ ಸಚಿವ ಯೋಗೇಂದ್ರ ಉಪಧ್ಯಾಯ ಅವರು ಸ್ವಾಗತಿಸಲಿದ್ದಾರೆ.

ಸ್ಮಾರಕವನ್ನು ಮುಚ್ಚುವ ಮೊದಲು ಸ್ಮಾರಕದಲ್ಲಿರುವ ಬುಕ್ಕಿಂಗ್ ಕಚೇರಿಗಳನ್ನು ಸಾರ್ವಜನಿಕರಿಗೆ ಎರಡು ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಮಾಲ್ಡೀವ್ಸ್ ಅಧ್ಯಕ್ಷರು ನಾಲ್ಕು ದಿನಗಳ ದ್ವಿಪಕ್ಷೀಯ ಭೇಟಿಗಾಗಿ ಭಾರತದಲ್ಲಿದ್ದಾರೆ. ಅವರು ಮಂಗಳವಾರ ಆಗ್ರಾ ಮತ್ತು ಮುಂಬೈ ಮತ್ತು ಬುಧವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಗುರುವಾರ ಮಾಲೆಗೆ ಮರಳಲಿದ್ದಾರೆ.

ಸೋಮವಾರ ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಮುಯಿಝು ಅವರು ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಮಾತುಕತೆಯನ್ನೂ ನಡೆಸಿದರು. ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಚೀನಾ ಪರ ಧೋರಣೆಯ ನಾಯಕನಾಗಿ ಗುರುತಿಸಿಕೊಂಡಿರುವ ಮುಯಿಝು, ಚುನಾವಣೆ ಸಂದರ್ಭದಲ್ಲಿ ಇಂಡಿಯಾ ಔಟ್ ಘೋಷಣೆಯಡಿ ಪ್ರಚಾರ ನಡೆಸಿದ್ದರು. ದ್ವೀಪ ರಾಷ್ಟ್ರದಲ್ಲಿನ ಭಾರತೀಯ ಪಡೆಗಳನ್ನು ಹೊರಹಾಕುವುದಾಗಿ ಶಪಥ ಮಾಡಿದ್ದರು. ತಮ್ಮ ದೇಶ ಭಾರತದ ಭದ್ರತೆಗೆ ಅಪಾಯವಾಗುವಂತಹ ಯಾವುದೇ ಕೆಲಸಗಳನ್ನೂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಭಾರತ ಮಾಲ್ಡೀವ್ಸ್ ಗೆ ಮೌಲ್ಯಯುತ ಮಿತ್ರ ಹಾಗೂ ಪಾಲುದಾರ ರಾಷ್ಟ್ರವಾಗಿದೆ, ನಮ್ಮ ಮೈತ್ರಿ, ಬಾಂಧವ್ಯಗಳು ಪರಸ್ಪರ ಗೌರವ ಹಾಗೂ ಹಿತಾಸಕ್ತಿಯ ಆಧಾರದಲ್ಲಿ ನಿರ್ಮಾಣಗೊಂಡಿವೆ. ನಾವು ವಿವಿಧ ಕ್ಷೇತ್ರಗಳಲ್ಲಿ ಇತರ ದೇಶಗಳೊಂದಿಗೆ ನಮ್ಮ ಸಹಕಾರವನ್ನು ವರ್ಧಿಸುತ್ತಿದ್ದರೂ, ನಮ್ಮ ಕ್ರಮಗಳು ನಮ್ಮ ಪ್ರದೇಶದ ಭದ್ರತೆ ಮತ್ತು ಸ್ಥಿರತೆಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಅವರ ನಿರ್ಧಾರದ ಬಗ್ಗೆ ಕೇಳಿದಾಗ, ಮುಯಿಝು ಅವರು ದೇಶೀಯ ಆದ್ಯತೆಗಳೆಂದು ಪರಿಗಣಿಸಿದ್ದನ್ನು ತಿಳಿಸುತ್ತಿರುವುದಾಗಿ ಹೇಳಿದರು.

 

 

Comments (0)

Your email address will not be published. Required fields are marked *

Back to top button