ರಾಜ್ಯ

ಮಹೇಶ್ ಜೋಶಿ ಗೂಟದ ಕಾರು ಹೋಯ್ತು.. ಕೀ ಕಿತ್ಕೊಂಡ ತಂಗಡಗಿ..!

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಶಾಕ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ದುಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದ ಜೋಶಿಗೆ ಅದೇ ಸಮ್ಮೇಳನ ದುಬಾರಿಯಾಗಿ ಪರಿಣಮಿಸಿದೆ. ಈ ಸಾಹಿತ್ಯ ಸಮ್ಮೇಳನದ ಸಂಪೂರ್ಣ ಲೆಕ್ಕ ಕೊಡುವಲ್ಲಿ ವಿಫಲರಾದ ಮಹೇಶ್ ಜೋಶಿ ಅವರ ಸಂಪುಟ ದರ್ಜೆ ಸ್ಥಾನಮಾನವನ್ನ ಕಿತ್ತುಕೊಳ್ಳಲಾಗಿದೆ.

ಇನ್ಮುಂದೆ ಮಹೇಶ್ ಜೋಶಿಗೆ ನೋ ಸೆಲ್ಯೂಟ್.. ನೋ ಕಾರ್.. ನೋ ಟಿಎ-ಡಿಎ.. ನೋ ಪೆಟ್ರೋಲ್ ಅಲಯನ್ಸ್.. ನೋ ವಿಐಪಿ ಸ್ಟೇಟಸ್​ ಯಾಕೆಂದರೆ ಮಹೇಶ್​ ಜೋಶಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ರದ್ದು ಮಾಡಲಾಗಿದೆ.  ತತ್​​ಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಮಾನ, ಸೌಲಭ್ಯ ವಾಪಸ್​ ಪಡೆಯಲಾಗಿದೆ.  ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ  ಆದೇಶ ಮಾಡಿದೆ. 2022ರ ಆಗಸ್ಟ್​ 3ರಂದು ರಾಜ್ಯ ಸಚಿವ ಸ್ಥಾನ ನೀಡಿ ಆದೇಶಿಸಲಾಗಿತ್ತು.  ಜನವರಿ 5, 2023ರಲ್ಲಿ ರಾಜ್ಯ ಸಚಿವರಿಗೆ ಸಿಗುವ ಸೌಲಭ್ಯ ನೀಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಸೌಲಭ್ಯವನ್ನು ಈಗ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ.

ಮಂಡ್ಯದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2.5 ಕೋಟಿ ರೂಪಾಯಿ ಖರ್ಚಾಗಿದ್ದರ ಬಗ್ಗೆ ಲೆಕ್ಕ ಕೊಡಲು ಮಹೇಶ್ ಜೋಶಿ ವಿಫಲರಾಗಿದ್ದರು. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ಆರೋಪವೂ ಇದೆ. ಹೀಗಾಗಿ ಕಸಾಪ ಅಧ್ಯಕ್ಷ ಮಹೇಶ್​ ಜೋಶಿ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿತ್ತು. ಕಸಾಪ ಅಧ್ಯಕ್ಷ ಸ್ಥಾನದಿಂದ ಮಹೇಶ್​ ಜೋಶಿ ವಜಾಗೊಳಿಸುವಂತೆಯೂ ಒತ್ತಾಯಿಸಲಾಗಿತ್ತು

Comments (0)

Your email address will not be published. Required fields are marked *

Back to top button