Tuesday, June 24, 2025
26.4 C
Bengaluru
Google search engine
LIVE
ಮನೆಫ್ರೀಡಂ ಟಿವಿ ವಿಶೇಷಉತ್ತರ ಕರ್ನಾಟಕದಲ್ಲಿ ಹೊಸ ರಾಜಕೀಯ; ಪಣಕ್ಕೆ ಕುಟುಂಬಗಳ ಪ್ರತಿಷ್ಠೆ

ಉತ್ತರ ಕರ್ನಾಟಕದಲ್ಲಿ ಹೊಸ ರಾಜಕೀಯ; ಪಣಕ್ಕೆ ಕುಟುಂಬಗಳ ಪ್ರತಿಷ್ಠೆ

ಮತ್ತೊಂದು ಹಂತದ ಲೋಕಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗುತ್ತಿದೆ. ಉತ್ತರ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೇ 7ರಂದು  ಮತದಾನ ನಡೆಯಲಿದೆ.  2019ರ ಚುನಾವಣೆಯಲ್ಲಿ ಈ ಎಲ್ಲಾ 14 ಕ್ಷೇತ್ರಗಳಲ್ಲಿ ಕಮಲ ಅರಳಿತ್ತು. ಕಾಂಗ್ರೆಸ್​ ಶೂನ್ಯ ಸಂಪಾದನೆ ಮಾಡಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಹಿಂದಿನ ಚುನಾವಣೆಗಿಂತಲೂ ಭಿನ್ನವಾಗಿದೆ.

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೇ ಉತ್ತರದಲ್ಲಿ ಭಿನ್ನವಾದ ರಾಜಕೀಯ ಪರಿಸ್ಥಿತಿಗಳಿವೆ. ಇಲ್ಲಿ ಸ್ಪರ್ಧೆ ಮಾಡಿರುವವರಲ್ಲಿ ಬಹುತೇಕರು ರಾಜಕೀಯ ವಾರಸ್ದಾರರಾಗಿದ್ದಾರೆ. ಇಲ್ಲಿ  ರಾಜಕೀಯ ಪಕ್ಷಗಳು ಮನೆ ಹಿರಿಯರನ್ನು ನೋಡಿಕೊಂಡೇ ಟಿಕೆಟ್ ಹಂಚಿಕೆ ಮಾಡಿವೆ. ಸೀನಿಯರ್​ಗಳು, ಮಂತ್ರಿಗಳು ಗೆಲುವಿನ ಭರವಸೆ ನೀಡಿದ ನಂತರವೇ ಟಿಕೆಟ್​ ಅಖೈರು ಮಾಡಲಾಗಿವೆ.  ಇಲ್ಲಿ ಕುಟುಂಬಗಳ ಪ್ರತಿಷ್ಠೆ ಪಣಕ್ಕೊಡ್ಡಲಾಗಿದೆ.

ದೊಡ್ಡವರ ಮೇಲೆ ಭಾರ:

ವಾರಸ್ದಾರರನ್ನು, ಬಂಧುಗಳನ್ನು ಕಣಕ್ಕಿಳಿಸಿದ ಪಕ್ಷಗಳಲ್ಲಿ ಕಾಂಗ್ರೆಸ್ ಮುಂದಿದೆ. 14 ಕ್ಷೇತ್ರಗಳಲ್ಲಿ ಕಾಂಗ್ರೆಸ್​-ಬಿಜೆಪಿಯ 28 ಅಭ್ಯರ್ಥಿಗಳ ಪೈಕಿ 10 ಮಂದಿ ರಾಜಕೀಯ ಕುಟುಂಬದಿಂದ ಬಂದವರೇ ಆಗಿದ್ದಾರೆ. ಇವರಲ್ಲಿ ಇಬ್ಬರಿಗೆ ಮಾತ್ರ ಈ ಹಿಂದೆ ಚುನಾವಣೆ ಎದುರಿಸಿದ ಅನುಭವ ಇದೆ. ಉಳಿದ 8 ಮಂದಿಗೆ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವವೂ ಇಲ್ಲ.  ಕಾಂಗ್ರೆಸ್ ಪಕ್ಷ 8 ವಾರಸ್ದಾರರನ್ನು, ಬಿಜೆಪಿ ಇಬ್ಬರನ್ನು ಕಣಕ್ಕೆ ಇಳಿಸಿದೆ.

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡಮನಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಎದುರಾಳಿ ಪಕ್ಷ ಬಿಜೆಪಿಯಿಂದ ಜೈಂಟ್ ಕಿಲ್ಲರ್ ಉಮೇಶ್ ಜಾಧವ್ ಮತ್ತೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಸತತ ಏಳು ಬಾರಿ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು 2019ರಲ್ಲಿ ಉಮೇಶ್ ಜಾಧವ್ ಸೋಲಿಸಿದ್ದರು.

ಶಿವಮೊಗ್ಗ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಹಿರಿಯ ಪುತ್ರ ಹಾಲಿ ಸಂಸದ ಬಿವೈ ರಾಘವೇಂದ್ರ ಮತ್ತೊಮ್ಮೆ ಇಲ್ಲಿ ಬಿಜೆಪಿ ಅಭ್ಯರ್ಥಿ. ಇಲ್ಲಿ ರಾಘವೇಂದ್ರ ಗೆಲ್ಲಿಸಿಕೊಳ್ಳುವುದು ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಪ್ರತಿಷ್ಠೆಯ ಪ್ರಶ್ನೆ.

ಮಾಜಿ ಮುಖ್ಯಮಂತ್ರಿ, ದಿವಂಗತ ಸಾರೆಕೊಪ್ಪ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್​ಕುಮಾರ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಗೀತಾ ಸಹೋದರ ಮಧು ಬಂಗಾರಪ್ಪ ಸಚಿವರಾಗಿರುವ ಕಾರಣ,ಅವರಿಗೂ ಇದು ಪ್ರತಿಷ್ಠೆಯ ಪ್ರಶ್ನೆ.

ಪುತ್ರನಿಗೆ ಹಾವೇರಿ ಟಿಕೆಟ್​ ಸಿಗದಿರಲು ಯಡಿಯೂರಪ್ಪ ಕುಟುಂಬವೇ ಕಾರಣ ಎಂದು ಬಲವಾಗಿ ನಂಬಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ. ತಾನು ಗೆಲ್ಲದಿದ್ದರೂ ಪರವಾಗಿಲ್ಲ ಬಿವೈ ರಾಘವೇಂದ್ರ ಸೋಲಬೇಕು. ಬಿಎಸ್​ ಯಡಿಯೂರಪ್ಪ ಪ್ರತಿಷ್ಠೆ ಮುಕ್ಕಾಗಿಸಬೇಕು ಎಂದು ಈಶ್ವರಪ್ಪ ಪಣ ತೊಟ್ಟಿದ್ದಾರೆ.

ದಾವಣಗೆರೆ: ರಾಜ್ಯ ಅಸೆಂಬ್ಲಿಯಲ್ಲಿ ಅತ್ಯಂತ ವಯೋವೃದ್ಧ ಶಾಸಕ 92 ವರ್ಷದ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್​ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಎದುರಾಳಿಯೂ ಶಾಮನೂರು ಸಂಬಂಧಿಯೇ ಆಗಿದ್ದಾರೆ. ಹಾಲಿ ಸಂಸದ ಜಿಎಂ ಸಿದ್ದೇಶ್ವರ್​ ಪತ್ನಿ ಗಾಯತ್ರಿ ಸಿದ್ದೇಶ್ವರ್​ಗೆ ಬಿಜೆಪಿ ಟಿಕೆಟ್​ ನೀಡಿದೆ. ಈ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿರುವ ವಿನಯ್ ಕುಮಾರ್​ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದು, ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ಮಂತ್ರಿಗಳೇ ಅಭ್ಯರ್ಥಿಗಳಾಗಿ..

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರ ಮೃಣಾಲ್ ಹೆಬ್ಬಾಳ್ಕರ್​ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ.  ಮೃಣಾಲ್​ಗೆ ಇದು ಮೊದಲ ಚುನಾವಣೆ. ತಾಯಿಯನ್ನೇ ನೆಚ್ಚಿ ಮೃಣಾಲ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇವರ ಎದುರಾಳಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ಚುನಾವಣೆಗೆ ಕೆಲವೇ ದಿನ ಮೊದಲು ರಾತ್ರೋರಾತ್ರಿ ಕ್ಯಾಂಪ್ ಬದಲಿಸಿದ್ದ ಜಗದೀಶ್​ ಶೆಟ್ಟರ್​ಗೆ ಇಲ್ಲಿ ಬಿಜೆಪಿ ಟಿಕೆಟ್​ ನೀಡಿದೆ. ಇಲ್ಲಿ ಗೆಲ್ಲುವುದು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಚಿಕ್ಕೋಡಿ: ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಇಲ್ಲಿ ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಇದು ಪ್ರಿಯಾಂಕಾ ಅವರಿಗೆ ಮೊದಲ ಚುನಾವಣೆ. ತಂದೆಯ ರಾಜಕೀಯ ಪ್ರಭಾವದ ಜೊತೆ ಚಿಕ್ಕಪ್ಪ-ದೊಡ್ಡಪ್ಪಂದಿರ ಕೃಪಾಶೀರ್ವಾದವನ್ನು ಪ್ರಿಯಾಂಕಾ ನೆಚ್ಚಿಕೊಂಡಿದ್ದಾರೆ. ಬಿಜೆಪಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಇಲ್ಲಿ ಪ್ರಿಯಾಂಕಾ ಎದುರಾಳಿಯಾಗಿದ್ದಾರೆ. ಇದು ಕೂಡ ಪ್ರತಿಷ್ಠೆಯ ಕಣವೇ ಆಗಿದೆ.

ಬೀದರ್​: ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಪುತ್ರ ಇಲ್ಲಿ ಕಾಂಗ್ರೆಸ್​ ಅಭ್ಯರ್ಥಿ. ಇವರಿಗೂ ಇದು ಚುನಾವಣೆಯ ಮೊದಲ ಅನುಭವ. ತಾತ-ತಂದೆಯ ರಾಜಕೀಯ ಅನುಭವವೇ ಸಾಗರ್ ಖಂಡ್ರೆ ಬಲವಾಗಿದೆ. ಬಿಜೆಪಿ ಹಾಲಿ ಸಂಸದ, ಕೇಂದ್ರ ಸಚಿವರೂ ಆಗಿರುವ ಭಗವಂತ್ ಖೂಬಾರನ್ನೇ ಮತ್ತೆ ಕಣಕ್ಕೆ ಇಳಿಸಿದೆ.

ಬಾಗಲಕೋಟೆ: ಸಚಿವ ಶಿವಾನಂದ ಪಾಟೀಲ್​ ಪುತ್ರಿ ಸಂಯುಕ್ತಾ ಪಾಟೀಲ್​ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಶಿವಾನಂದ ಪಾಟೀಲ್ ವಿಜಯಪುರ ಜಿಲ್ಲೆಯವರಾದರೂ, ರಾಜಕೀಯ ಪ್ರಭಾವ, ಸಮುದಾಯದ ಬಲ ನಂಬಿಕೊಂಡು ಪುತ್ರಿಯ ರಾಜಕೀಯ ಭವಿಷ್ಯವನ್ನು ಪಣಕ್ಕೆ ಒಡ್ಡಿದ್ದಾರೆ. ಇಲ್ಲಿ ಹಾಲಿ ಸಂಸದ ಪಿಸಿ ಗದ್ದೀಗೌಡರ್​ ಅವರನ್ನೇ ಬಿಜೆಪಿ ಕಣಕ್ಕೆ ಇಳಿಸಿದೆ.

ಕಣದಲ್ಲಿ ಪ್ರಭಾವಿಗಳು:

ಧಾರವಾಡ: ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಲ್ಹಾದ್ ಜೋಶಿ ಇಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇವರ ಎದುರಾಳಿ ಕಾಂಗ್ರೆಸ್ ಪಕ್ಷ ವಿನೋದ್ ಅಸೂಟಿ ಅಭ್ಯರ್ಥಿಯಾಗಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಬಲವೂ ಕಾಂಗ್ರೆಸ್ ಪಕ್ಷಕ್ಕೆ ಇದೆ.

ಹಾವೇರಿ: ಹಾಲಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧಿಸಲು ಒಲ್ಲೆ ಎಂದ ಕಾರಣ ಕ್ಷೇತ್ರ ಉಳಿಸಿಕೊಳ್ಳುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಇಲ್ಲಿ ಬಿಜೆಪಿ ಕಣಕ್ಕೆ ಇಳಿಸಿದೆ. ಇವರ ಎದುರಾಳಿಯಾಗಿ ಹೊಸಬರಾದ ಆನಂದ ಗಡ್ಡದೇವರಮಠ ಅವರನ್ನು ಕಾಂಗ್ರೆಸ್​ ಫೀಲ್ಡಿಗೆ ಇಳಿಸಿದೆ.

ಬಳ್ಳಾರಿ: ಹಾಲಿ ಸಂಸದ ದೇವೇಂದ್ರಪ್ಪಗೆ ಟಿಕೆಟ್​ ನಿರಾಕರಿಸಿದ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಮಾಜಿ ಮಂತ್ರಿ ಶ್ರೀರಾಮುಲು ಅವರಿಗೆ ಮಣೆ ಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಸಂಡೂರಿನ ಹಾಲಿ ಶಾಸಕ ಎರೆಗಾರ್ ತುಕಾರಾಮ್ ಅವರನ್ನು ಲೋಕಸಭೆ ಅಖಾಡಕ್ಕೆ ಇಳಿಸಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದೆ.

ಇತರೆ ಕ್ಷೇತ್ರಗಳ ವಿಶೇಷ

ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್​​ ಅವರನ್ನೇ ಮತ್ತೆ ಕಣಕ್ಕೆ ಇಳಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಇವರು ಸೋತಿದ್ದರು. ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡದೇ ಮಾಜಿ ಶಾಸಕ ಶರಣಪ್ಪ ಪುತ್ರ ಬಸವರಾಜ್ ಕ್ಯಾವಟೋರ್​ಗೆ ಟಿಕೆಟ್ ನೀಡಿದೆ. ಇದರಿಂದ ಸಿಡಿದೆದ್ದ ಸಂಗಣ್ಣ ಕಾಂಗ್ರೆಸ್ ಸೇರಿ ರಾಜಶೇಖರ್ ಹಿಟ್ನಾಳ್​ರನ್ನು ಬೆಂಬಲಿಸಿದ್ದಾರೆ. ಆದರೆ, ಗಂಗಾವತಿ ಕಾಂಗ್ರೆಸ್ ಭಿನ್ನಮತ ರಾಜೇಶೇಖರ್​ಗೆ ದುಬಾರಿ ಆಗುವ ಭೀತಿ ಎದುರಾಗಿದೆ.  ಬಿಜೆಪಿ ಅಭ್ಯರ್ಥಿಗೆ ಇತ್ತೀಚಿಗೆ ಮತ್ತೆ ಕಮಲ ಹಿಡಿದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಬೆಂಬಲವಿದೆ.

ವಿಜಯಪುರ: ಬಿಜೆಪಿಯ ಹಾಲಿ ಸಂಸದ ರಮೇಶ್ ಜಿಗಜಿಣಗಿ ಇಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ರಾಜು ಅಲಗೂರ ಅವರನ್ನು ಕಣಕ್ಕೆ ಇಳಿಸಿದೆ. ಜಿಗಜಿಣಗಿಗೆ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲವಿದ್ದರೇ, ರಾಜು ಅಲಗೂರ ಅವರಿಗೆ ಸಚಿವ ಎಂಬಿ ಪಾಟೀಲರ ಬಲ ಇದೆ.

ರಾಯಚೂರು: ಪಕ್ಷದೊಳಗೆ ತೀವ್ರ ವಿರೋಧ, ಅಸಮಾಧಾನದ ನಡುವೆಯೂ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರ ಮೇಲೆ ಬಿಜೆಪಿ ಮತ್ತೆ ವಿಶ್ವಾಸವಿರಿಸಿದೆ. ಇಲ್ಲಿ ರಾಜಾ ಅಮರೇಶ್ವರ ನಾಯಕ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿವೃತ್ತ ಐಎಎಸ್ ಅಧಿಕಾರಿ ಕುಮಾರನಾಯಕ್​ರನ್ನು ಕಣಕ್ಕೆ ಇಳಿಸಿದೆ. ಇಲ್ಲಿ ಬಿಸಿಲು ರಾಜಕೀಯ ನಡೆದಿದೆ.

ಉತ್ತರ ಕನ್ನಡ: ಇಲ್ಲಿ ಬಿಜೆಪಿಯ ಹಿಂದೂತ್ವ ಫೈರ್ ಬ್ರಾಂಡ್​, ವಿವಾದಾತ್ಮಕ ಹೇಳಿಕೆಗಳ ವೀರ ಅನಂತಕುಮಾರ್ ಹೆಗಡೆಗೆ ಬಿಜೆಪಿ ಕೊಕ್ ನೀಡಿದೆ. ಶಿರಸಿ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿದ್ದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಮಣೆ ಹಾಕಿದೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ  ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್​ ಪತ್ನಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ಇವರು ಕೂಡ ಖಾನಾಪುರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಇಲ್ಲಿ ಕಾಗೇರಿ ಅವರಿಗೆ ಅನಂತ ಕುಮಾರ್ ಹೆಗಡೆ ಬೆಂಬಲ ಸಿಕ್ಕಿಲ್ಲ. ಇದೇ ವೇಳೆ, ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದ ಪರ ನಿಂತಿಲ್ಲ. ಇದು ಬಿಜೆಪಿಗೆ ತಲೆ ಬಿಸಿ ತಂದಿದೆ.

2019ರ ಫಲಿತಾಂಶ

  • 14 ಕ್ಷೇತ್ರ
  • ಬಿಜೆಪಿ – 14
  • ಕಾಂಗ್ರೆಸ್ -00
Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments