ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಭಾರತ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಛೇರಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಯಾವುದೇ ಅಡೆತಡೆ ಇಲ್ಲದೆ ಮತದಾನ ಮಾಡಲು ವಿವಿಧ ಸೇವಾ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಂಪ್ (ಇಳಿಜಾರು) ರೈಲಿಂಗ್, ಗಾಲಿ ಕುರ್ಚಿಗಳು, ಅಂಧ ಮತದಾರರಿಗೆ ಅಗತ್ಯವಿರುವಂತೆ ಮತಯಂತ್ರದಲ್ಲಿ ಬೈಲ್ ಲಿಪಿ ಸಂಖ್ಯೆಗಳು, ಬೈಲ್ ಲಿಪಿಯ ಡಮ್ಮಿ ಮತಪತ್ರ, ಬೂತಕನ್ನಡಿ, ಸಂಜ್ಞಾ ಭಾಷಾ ತಜ್ಞರ ನೆರವು, ಸೂಚನಾ ಫಲಕಗಳು, ಶೌಚಾಲಯದ ವ್ಯವಸ್ಥೆ, ಪ್ರತ್ಯೇಕ ಸರಥಿ ಸಾಲು, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಆರೋಗ್ಯ ಸಹಾಯಕರ ನೆರವು, ಉಚಿತ ಸಾರಿಗೆ ವ್ಯವಸ್ಥೆ ಹಾಗೂ ತರಬೇತಿ ಪಡೆದ ಸ್ವಯಂ ಸೇವಕರು ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.
ಎಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ರಾಜ್ಯ ಚುನಾವಣಾ ಸಂಯೋಜಕರಾದ ಎಸ್.ನಟರಾಜ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.