Top Newsರಾಜಕೀಯಸುದ್ದಿ

ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಇಂಡಿ ಒಕ್ಕೂಟ ಆಕ್ಷೇಪ: ಚುನಾವಣಾ ಆಯೋಗಕ್ಕೆ ಕೈ ಪಡೆ ಒತ್ತಾಯವೇನು?

ಹೊಸದಿಲ್ಲಿ: ಏಳು ಹಂತದ ಚುನಾವಣೆ ಬೆನ್ನಿಗೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾದ ಮರು ದಿನ ಭಾನುವಾರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಇಂಡಿ ಮೈತ್ರಿ ಒಕ್ಕೂಟದ ನಾಯಕರು ಮತ ಎಣಿಕೆ ಸಂಬಂಧ ನಿಯಮ ಬದಲಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ. ಹಳೇ ಕ್ರಮವನ್ನೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ಅಭಿಷೇಕ್‌ ಮನುಸಿಂಘ್ವಿ ನೇತೃತ್ವದಲ್ಲಿ ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ ಪ್ರತಿಪಕ್ಷಗಳ ಮುಖಂಡರು, ವಿದ್ಯುನ್ಮಾನ ಮತಯಂತ್ರ (EVM) ದ ಮತ ಎಣಿಕೆಗೂ ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡುವಂತೆ ಆಗ್ರಹಿಸಿದ್ದಾರೆ.

ಹಳೆ ನಿಯಮದಂತೆ ಮತ ಎಣಿಕೆ ನಡೆಸಬೇಕು. ಮತ ಎಣಿಕೆ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕಣ್ಗಾವಲಿರಬೇಕು. ವಿವಿಪ್ಯಾಟ್‌ ಚೀಟಿಗಳ ಎಣಿಕೆ ಬಗ್ಗೆ ಖಚಿತ ಮಾಹಿತಿ ನೀಡಬೇಕು. ಬೂತ್‌ ಏಜೆಂಟ್‌ಗಳ ಸಮ್ಮುಖದಲ್ಲಿ ಇವಿಎಂಗಳ ಪೂರ್ಣ ಪರಿಶೀಲನೆ ಬಳಿಕವೇ ಮತ ಎಣಿಕೆ ಪ್ರಕ್ರಿಯೆ ಶುರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಎಣಿಕೆ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ಮಾರ್ಗಸೂಚಿಗಳನ್ನು ಅನುಸರಿಸುವ ಅಗತ್ಯವನ್ನು ವಿರೋಧ ಪಕ್ಷಗಳು ಒತ್ತಿ ಹೇಳಿವೆ.

ಬಿಜೆಪಿಯಿಂದಲೂ 4 ಬೇಡಿಕೆ

ಪ್ರತಿಪಕ್ಷ ನಾಯಕರ ಬೆನ್ನಲ್ಲೇ ಬಿಜೆಪಿ ನಿಯೋಗ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಮತ ಎಣಿಕೆ ವೇಳೆ ಚುನಾವಣಾ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ ಸಚಿವ ಪಿಯುಷ ಗೋಯಲ್‌ ನೇತೃತ್ವದ ನಿಯೋಗ, ಮತ ಎಣಿಕೆ ವೇಳೆ ಸೂಕ್ತ ಭದ್ರತೆ ಕಲ್ಪಿಸಬೇಕು. ಪ್ರತಿಪಕ್ಷಣದ ಮಾಹಿತಿಯನ್ನು ನಿಯಮಾನುಸಾರ ಪ್ರಕಟಿಸಬೇಕು, ಮತ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಜೆಪಿ ನಿಯೋಗ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಸೋಮವಾರ ಆಯೋಗದ ಸುದ್ದಿಗೋಷ್ಠಿ

ಮತ ಎಣಿಕೆಗೂ ಮುನ್ನಾ ದಿನವಾದ ಸೋಮವಾರದಂದು ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಸೇರಿ ಮೂವರು ಆಯುಕ್ತರು ಉಪಸ್ಥಿತರಿರಲಿದ್ದಾರೆ. ಹೊಸದಿಲ್ಲಿಆಕಾಶವಾಣಿ ಕೇಂದ್ರದ ರಂಗಭವನ ಸಭಾಂಗಣದಲ್ಲಿಆಯೋಗದ ಸುದ್ದಿಗೋಷ್ಠಿ ನಡೆಯಲಿದ್ದು, ಮಂಗಳವಾರ ನಡೆಯಲಿರುವ ಮತ ಎಣಿಕೆ ಕುರಿತು ಮಾಹಿತಿ ನೀಡುವ ಸಾಧ್ಯತೆಗಳಿವೆ

ಮತ ಎಣಿಕೆಗೆ ಕೈಗೊಂಡಿರುವ ಸಿದ್ದತೆಗಳು, ಭದ್ರತೆ, ಫಲಿತಾಂಶ ಪ್ರಕಟಿಸುವ ವಿಧಾನಗಳು, ಅಭ್ಯರ್ಥಿಗಳಿಗೆ ವಿಜಯ ಪ್ರಮಾಣ ಪತ್ರ ವಿತರಿಸುವ ಕುರಿತು ಕೆಲವೊಂದು ವಿಷಯಗಳ ಬಗ್ಗೆ ಮುಖ್ಯ ಆಯುಕ್ತರು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದೇ ವೇಳೆ ಏಳು ಹಂತದ ನಡೆದ ಮತದಾನ ಪ್ರಮಾಣದ ಮಾಹಿತಿ, ರಾಜ್ಯವಾರು, ಕ್ಷೇತ್ರವಾರು ಮತ ಪ್ರಮಾಣದ ಮಾಹಿತಿ ನೀಡಲಿದೆ. ಚುನಾವಣೆ ವೇಳೆ ವಶಪಡಿಸಿಕೊಂಡ ಹಣ, ಆಭರಣ ಮತ್ತಿತರ ವಸ್ತುಗಳ ಮಾಹಿತಿ ನೀಡುವ ಸಂಭವವಿದೆ.

ಜತೆಗೆ ವಿವಿಧ ಪಕ್ಷಗಳು ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಸಲ್ಲಿರುವ ದೂರುಗಳು, ಅವುಗಳ ಬಗ್ಗೆ ಆಯೋಗ ತೆಗೆದುಕೊಂಡ ಕ್ರಮಗಳ ಕುರಿತು ಮುಖ್ಯ ಆಯುಕ್ತ ರಾಜೀವ್‌ ಕುಮಾರ್‌ ಮಾಹಿತಿ ಹಂಚಿಕೊಳ್ಳಲಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

 

Comments (0)

Your email address will not be published. Required fields are marked *

Back to top button