ವಿಜಯಪುರ: ರಾಜ್ಯದಲ್ಲಿ ಸಿಎಂ ಕುರ್ಚಿ ಬಗ್ಗೆ ಕಳೆದ ಕೆಲ ತಿಂಗಳಿಂದ ಚರ್ಚೆಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಮತ್ತೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಪ್ರಕೃತಿ ವಿಕೋಪ, ರಾಜ್ಯ ರಾಜಕಾರಣ, ದೇಶದ ರಾಜಕಾರಣ, ದೇಶ ವಿದೇಶದ ಸಂಘರ್ಷಗಳು, ಬಾಂಬ್ ಸ್ಫೋಟ ಇತ್ಯಾದಿಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯುವ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮೀಜಿ, ಮೊನ್ನೆ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿದ್ದೆ. ಈ ವೇಳೆ ಉತ್ತರ ಕರ್ನಾಟಕದಿಂದ ಯಾರಾದ್ರು ಸಿಎಂ ಆದ್ರೆ ಎಂಬಿ ಪಾಟೀಲ್ ಆಗಲಿ ಎಂದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೋಡಿಶ್ರೀಯವರು ಮಾತನಾಡುತ್ತಾ ಎಂಬಿ ಪಾಟೀಲ್ ಸಿಎಂ ಆಗಬೇಕು ಎಂದು ಪ್ರಸ್ತಾಪಿಸಿದರು. ಇನ್ನು ಈ ವೇಳೆ ಸ್ವಾಮೀಜಿ ಪಕ್ಕದಲ್ಲೇ ಸಚಿವ ಎಂಬಿ ಪಾಟೀಲ್ ಕುಳಿತಿದ್ದರು. ಎಂಬಿ ಪಾಟೀಲ್ ಸಿಎಂ ಆಗಲಿ ಎಂದು ಸ್ವಾಮೀಜಿ ಹೇಳುತ್ತಿದಂತೆ ಸಚಿವರು ಕೈಮುಗಿದು ನಮಸ್ಕರಿಸಿದ್ದಾರೆ.
ಇನ್ನು ಕಳೆದ ಬಾರಿ ರಾಜ್ಯದಲ್ಲಿ ಮಹಿಳಾ ಸಿಎಂ ಆಗುತ್ತಾರೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಭಾರೀ ಚರ್ಚೆಗೆ ಬಂದಿತ್ತು. ಇದೀಗ ಕೋಡಿ ಮಠದ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದು, ಎಂಬಿ ಪಾಟೀಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.