ಬೆಂಗಳೂರು :
ಕೃಷ್ಣಾ ಜಲಭಾಗ್ಯ ನಿಗಮಕ್ಕೆ ನೂತನ ಎಂ.ಡಿ ಆಗಿ ಐಎಎಸ್ ಅಧಿಕಾರಿ ಕೆ.ಪಿ. ಮೋಹನ್ ರಾಜ್ ಅವರನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಐಎಎಸ್ ವರ್ಸಸ್ ಚೀಫ್ ಎಂಜಿನಿಯರ್ಸ್ ನಡುವಿನ ಮುಸುಕಿನ ಗುದ್ದಾಟದಲ್ಲಿ ಐಎಎಸ್ ಲಾಬಿ ಗೆದ್ದಂತಾಗಿದೆ. ಕೆಬಿಜೆಎನ್ಎಲ್ ಗೆ ಹಿಂದಿನಿಂದ ಎಂಡಿ ಗಾದಿಗೆ ಐಎಎಸ್ ಮತ್ತು ಸಿಇ ಗಳ ನಡುವೆ ಗುದ್ದಾಟ ನಡೆಯುತ್ತಲೇ ಬಂದಿದೆ. ಆರಂಭದಲ್ಲಿ ಸಿಇಗಳು ಇದ್ದರೆ, ನಂತರದಲ್ಲಿ ಐಎಎಸ್ಗಳು ಆ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಈ ಹಿಂದೆ ರತ್ನಾ ನಾಯಕ್, ಮಹೇಶ್, ಪ್ರಭಾಕರ್ ಚಿಣಿ, ಶಿವಕುಮಾರ್, ರಾಜೇಶ್ ಅಮಿನ್ ಭಾವಿ ಕೆಲಸ ನಿರ್ವಹಿಸಿದ್ದರು. ಐಎಎಸ್ ಅಧಿಕಾರಿ ಕಪಿಲ್ ಮೋಹನ್, ಬಸವರಾಜ್, ಅಂಜುಮ್ ಪರ್ವೇಜ್, ಆಗವಾನಿ, ಜಯರಾಂ, ಶಂಕರ್ ಅವರಂತಹ ಅಧಿಕಾರಿಗಳು ಸೇವೆ ಸಲ್ಲಿಸಿದ್ದರು.

ಕಾಂಗ್ರೆಸ್ ಸರ್ಕಾರ ಬರುತ್ತಲೇ, ಈ ನಿಗಮದಲ್ಲಿ ಹಲವು ಅದ್ವಾನಗಳು ಬಯಲಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಐಎಎಸ್ ಅಧಿಕಾರಿ ಕೆ.ಪಿ. ಮೋಹನ್ ರಾಜ್ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಗರಣಗಳ ಗೂಡಾಗಿರುವ ನಿಗಮವನ್ನ ಹಳಿಗೆ ತರುವ ಪ್ರಯತ್ನದ ಭಾಗವಾಗಿ, ಸರ್ಕಾರ ಐಎಎಸ್ ಅಧಿಕಾರಿಯನ್ನ ನೇಮಿಸಿದೆ. ಸಾವಿರಾರು ಕೋಟಿ ತೂಗುವ ಗುತ್ತಿಗೆದಾರು, ಗುತ್ತಿಗೆದಾರರ ರೂಪದ ರಾಜಕಾರಣಿಗಳು, ಶಾಸಕರು, ನಿಗಮವನ್ನ ತಮ್ಮ ಪರ್ಮನೆಂಟ್ ಆದಾಯದ ಮೂಲ ಮಾಡಿಕೊಂಡಿದ್ದಾರೆ. ಈ ಪ್ರಭಾವಿಗಳು ಅಧಿಕಾರಿಗಳನ್ನೇ ತಮ್ಮ ಕಂಪನಿಗಳ ಕೆಲಸಗಾರರಂತೆ ಬಳಸಿಕೊಳ್ತಿದ್ದಾರೆ. ಫೇಕ್ ಎಸ್ಟಿಮೇಟ್ಸ್, ನಕಲಿ ಕಾಮಗಾರಿ, ಡುಪ್ಲಿಕೇಟ್ ಬಿಲ್, ಅಕ್ರಮ ಇಎಫ್ಐ, ನಿಯಮ ಮೀರಿ ಟೆಂಡರ್ ಹೀಗೆ ಅಕ್ರಮಗಳ ಪಟ್ಟಿ ದೊಡ್ಡದಿದೆ. ಈ ಭ್ರಷ್ಟರ ಗುಂಪುಗಳು ನಡೆಸುತ್ತಿರುವ ಹಗರಣಗಳನ್ನ ಹೊಸ ಎಂಡಿ ಹೇಗೆ ತಡೆಯುತ್ತಾರೆ ಎಂಬ ಕುತೂಹಲವಿದೆ.