ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ವಿಚಾರದಲ್ಲಿ ಸರ್ಕಾರ ಯಡವಟ್ಟಿನ ಮೇಲೆ ಯಡವಟ್ಟು ಮಾಡಿ ಮುಜುಗರಕ್ಕೆ ಒಳಗಾಗ್ತಿದೆ. ವಾಟರ್ ಆ್ಯಕ್ಟ್ 1974 ರ ಅಡಿ ಮಂಡಳಿಯ ಅಧ್ಯಕ್ಷರ ಕಾರ್ಯವ್ಯಾಪ್ತಿ, ಸೇವಾವಧಿ ಕುರಿತು ಸ್ಪಷ್ಟ ಉಲ್ಲೇಖವಿದ್ದರೂ ಸರ್ಕಾರ ನಿಯಮಬಾಹಿರ ನಡೆ ಅನುಸರಿಸಿರುವುದು ಬಹಿರಂಗವಾಗಿದೆ. ಕಳೆದ ಅವಧಿಯಲ್ಲಿ ಮಂಡಳಿಯ ಅಧ್ಯಕ್ಷರನ್ನು DPAR ಮಾಡಿತ್ತು. ಸುಪ್ರೀಂಕೋರ್ಟ್, ಹೈಕೋರ್ಟ್ ನ ನಿರ್ದೇಶನಗಳು ಹಾಗೂ ವಾಟರ್ ಆ್ಯಕ್ಟ್ ಅಡಿ DPAR ಈ ನೇಮಕಾತಿ ಆದೇಶ ಹೊರಡಿಸಿತ್ತು. ಮತ್ತೊಬ್ಬ ಅಧ್ಯಕ್ಷರ ನೇಮವಾಗುವವರೆಗೂ ಹಂಗಾಮಿಗಳನ್ನು ನೇಮಿಸುವಂತಿಲ್ಲ. ಒಂದು ವೇಳೆ ಹಳೆಯ ಅಧ್ಯಕ್ಷರ ಅವಧಿ ಮುಗಿದಿದ್ದರೆ ಹೊಸಬರ ನೇಮಕವಾಗುವವರೆಗೂ ಹಳೆಯ ಅಧ್ಯಕ್ಷರೇ ಮುಂದುವರೆಯಬೇಕೆಂಬ ಉಲ್ಲೇಖ ಆಕ್ಟ್ ನಲ್ಲೂ ಇದೆ . ಆದರೂ ನಿಯಮ ಗಾಳಿಗೆ ತೂರಿರುವ ಸರ್ಕಾರವು 14-11-2024 ರಂದು ಮಂಡಳಿಗೆ IAS ಅಧಿಕಾರಿ ವಿಜಯ್ ಮೋಹನ್ ರಾಜ್ ಅವರನ್ನು ಹಂಗಾಮಿಯಾಗಿ ನೇಮಿಸಿ ಆದೇಶಿಸಿದೆ.
ವಿಜಯ್ ಮೋಹನ್ ರಾಜ್ ಅವರು ಪದಮುಕ್ತ ಅಧಿಕಾರಿಯಿಂದ ಚಾರ್ಜ್ ತೆಗೆದುಕೊಳ್ಳದೆ ಅದೇ ದಿನ ಮಧ್ಯಾಹ್ನ ತಾವೇ ಅಧಿಕಾರ ವಹಿಸಿಕೊಂಡಿರುವುದು ದಾಖಲೆಯಿಂದ ಗೊತ್ತಾಗಿದೆ. ಹಿಂದಿನ ಅಧ್ಯಕ್ಷರನ್ನು DPAR ನೇಮಕ ಮಾಡಿದ್ದು ಅವರ ಅವಧಿ ಮುಗಿದ ಬಳಿಕ DPARನಿಂದ ಅಧ್ಯಕ್ಷರ ರಿಲೀವಿಂಗ್ ಆರ್ಡರ್ ಬರಬೇಕಿತ್ತು. ಆದರೆ ಸಚಿವಾಲಯದಿಂದ ವಿಜಯ್ ಮೋಹನ್ ರಾಜ್ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದೆಲ್ಲವನ್ನು ನೋಡಿದರೆ ಉದ್ದೇಶಪೂರ್ವಕವಾಗಿ ಸರ್ಕಾರವು ಮಂಡಳಿಯ ಕಾರ್ಯಕಲಾಪದಲ್ಲಿ ಹಸ್ತಕ್ಷೇಪ ಮಾಡಿದೆ. ಜತೆಗೆ ಕಾನೂನು ಪ್ರಕಾರ ಹೊಸ ಅಧ್ಯಕ್ಷರ ಆಯ್ಕೆ ಆಗುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುವ ಹಿಂದಿನ ಅಧ್ಯಕ್ಷರ ಕಾನೂನುಬದ್ಧ ಅಧಿಕಾರವನ್ನು ಸರ್ಕಾರ ಪ್ರಯತ್ನ ಪೂರ್ವಕವಾಗಿ ಹಾಗೂ ಬಲವಂತವಾಗಿ ಮೊಟಕುಗೊಳಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ DPARನ ಅಧಿಕಾರಿಯೊಬ್ಬರು ಫ್ರೀಡಂ ಟಿವಿಗೆ ತಿಳಿಸಿದ್ದಾರೆ.
ಪ್ರಕರಣದ ರಾಜಕೀಯ ಹಿನ್ನೆಲೆ:
ಮಾಲಿನ್ಯ ನಿಯಂತ್ರಣ ಮಂಡಳಿಯ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕಠಿಣ ನಿಲುವುಗಳನ್ನು ತೆಗೆದುಕೊಂಡಿತ್ತು. ಇದಕ್ಕೆ ಕಾರಣ ಮೊದಲನೇಯದಾಗಿ ಹಿಂದಿನ ಅಧ್ಯಕ್ಷರು ಬಿಜೆಪಿ ಅವಧಿಯಲ್ಲಿ ನೇಮಕವಾಗಿದ್ದವರು ಎಂಬುದು. ಎರಡನೇಯದಾಗಿ ಮಂಡಳಿಯಲ್ಲೇ ಕೆಲಸ ಮಾಡುವ ನೌಕರರೊಬ್ಬರು ಈಗಿನ ಸರ್ಕಾರದ ಪ್ರಭಾವಿಗಳ ಪರಮಾಪ್ತರಾಗಿದ್ದು, ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿಸಲು ಸರ್ಕಾರದ ಕೆಲ ಹಿರಿಯರು ಬಹಳಷ್ಟು ಪ್ರಯತ್ನ ಮಾಡಿದ್ದರು. ಆದರೆ ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಸೋಲಾಗಿತ್ತು. ಈ ಮುಜುಗರದಿಂದ ನೊಂದಿದ್ದ ಸರ್ಕಾರವು ಸಮಯ ಸಿಕ್ಕಾಗಲೆಲ್ಲಾ ಆಗಿನ ಅಧ್ಯಕ್ಷರನ್ನು ಹಣಿಯಲು ಯತ್ನಿಸಿತ್ತು. ಜತೆಗೆ ಅವರ ಅಧಿಕಾರದ ಮೇಲೆ ಲಗಾಮು ಹಾಕಿ ಪ್ರತಿಯೊಂದರ ಮೇಲೆ ನಿಗಾ ಇಟ್ಟು ಅವರ ಅಧಿಕಾರವನ್ನು ಮೊಟಕುಗೊಳಿಸಲು ಯತ್ನಿಸಿತ್ತು. ಇನ್ನೇನು ಅಧಿಕಾರ ಮುಗಿಯುತ್ತೆ ಎಂದು ಗೊತ್ತಾದಾಗ ಅವರ ಜಾಗಕ್ಕೆ ಮಂಡಳಿಯಲ್ಲಿರುವ ಬೇರೊಬ್ಬರನ್ನು ನೇಮಿಸುವ ಪ್ರಯತ್ನ ನಡೆದಿತ್ತು.
ಆದರೆ ಕಾನೂನಿನ ತೊಡಕು ಹಿನ್ನೆಲೆಯಲ್ಲಿ ವಿಜಯ್ ಮೋಹನ್ ರಾಜ್ ಅವರಿಗೆ ಅವಕಾಶ ಸಿಕ್ಕಿದೆ. ಆದರೆ ಅಧ್ಯಕ್ಷರ ಹುದ್ದೆಗೆ ಶೋಧನಾ ಸಮಿತಿ ರಚಿಸಿ ಅರ್ಜಿಗಳನ್ನು ಕರೆದು ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೂ ಹಂಗಾಮಿ ನೇಮಕದ ಅವಕಾಶ ಇಲ್ಲ. ಕಳೆದ ಕೆಲ ದಿನಗಳ ಹಿಂದೆ 11-11-2024 ರಂದು ಹೊಸ ಅಧ್ಯಕ್ಷರ ನೇಮಕಕ್ಕಾಗಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈ ಅಧಿಸೂಚನೆಯನ್ನು 06-12-2024 ರಂದು ಸರ್ಕಾರ ವಾಪಸ್ ಪಡೆದಿದೆ. ತಾನೇ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ವಾಪಸ್ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಭಾವಿ ಶಾಸಕರೊಬ್ಬರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಲು ಹವಣಿಸುತ್ತಿದ್ದು, ಅವರನ್ನು ಅಧ್ಯಕ್ಷರಾಗಿಸಲು ಸರ್ಕಾರವು ಶಾರ್ಟ್ ಕಟ್ ಗಳನ್ನು ಹುಡುಕುತ್ತಿದೆ. ಅಧ್ಯಕ್ಷಗಾದಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳನ್ನು ಬದಲಿಸಲು ಮುಂದಾಗುತ್ತಿದೆ. ಹಲವು ಬಾರಿ ನ್ಯಾಯಾಲಯಗಳ ತಪರಾಕಿಯ ಮಧ್ಯೆ ಸರ್ಕಾರವು ಯಡವಟ್ಟುಗಳ ಮೇಲೆ ಯಡವಟ್ಟು ಮಾಡುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಂತಹ ಸೂಕ್ಷ್ಮ ಸ್ವಾಯತ್ತ ಸಂಸ್ಥೆಗಳಿಗೆ ರಾಜಕಾರಣಿಗಳನ್ನು ನುಗ್ಗಿಸಿ ಗಂಜಿ ಕೇಂದ್ರವಾಗಿಸುವ ಪ್ರಯತ್ನಗಳಿಗೆ ಅಧಿಕಾರಿ ವಲಯದಿಂದ ಆಕ್ಷೇಪ ಕೇಳಿ ಬಂದಿದೆ.
ಅರಣ್ಯ ಮಂತ್ರಿಯ ಧರ್ಮ ಸಂಕಟ..!
ಇತ್ತ ಸ್ವಜನಪಕ್ಷಪಾತ, ಅಧಿಕಾರಶಾಹಿಯ ಲಾಬಿ ಒಂದೆಡೆಯಾದರೆ ಶಾಕರೊಬ್ಬರು ಬಂದು ಅಧ್ಯಕ್ಷಗಾದಿಗೆ ಕೂತರೆ ನಮ್ಮ ದಾರಿ ಕಠಿಣವಾಗಲಿದೆ ಎಂದು ಅರಣ್ಯ ಮಂತ್ರಿಯ ಆಪ್ತವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಅಧ್ಯಕ್ಷರಾಗಿ ಶಾಸಕರೊಬ್ಬರು ಬಂದರೆ ಸಹಜವಾಗಿ ಸಚಿವರ ಹಸ್ತಕ್ಷೇಪಕ್ಕೆ ಅವಕಾಶವಿರುವುದಿಲ್ಲ. ಹಾಗಾಗಿ ಅರಣ್ಯ ಸಚಿವರು ಹೊಸ ನೇಮಕ ಪ್ರಕ್ರಿಯೆಗೆ ರೆಡ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿಯೊಂದು ಕಾರ್ಯ ಚಟುವಟಿಕೆ, ಬೆಳವಣಿಗೆಯು ಕೋರ್ಟ್ ಅಂಗಳಕ್ಕೆ ಹೋಗುತ್ತಿರುವುದು ನಡೆಯುತ್ತಾ ಬಂದಿದ್ದು, ಮತ್ತೆ ಈ ಎಲ್ಲಾ ನೇಮಕ ಪ್ರಕ್ರಿಯೆ ನ್ಯಾಯಾಲಯದ ಮಧ್ಯಪ್ರವೇಶದ ಹೊರತಾಗಿ ಬಗೆಹರಿಯುವಂತೆ ಕಾಣುತ್ತಿಲ್ಲ. ಸರ್ಕಾರ ಮಂಡಳಿ ಅಧ್ಯಕ್ಷರ ನೇಮಕವನ್ನು ಕಾನೂನಿನ ಪರಿಮಿತಿಗೆ ಬಿಡಬೇಕು. ತನ್ನ ಹಸ್ತಕ್ಷೇಪವನ್ನು ನಿಲ್ಲಿಸಬೇಕು. ಅತ್ಯಂತ ಸೂಕ್ಷ್ಮ ವಿಚಾರವಾದ ಮಾಲಿನ್ಯ ವಿಚಾರದಲ್ಲಿ ರಾಜಕಾರಣ ಸುಳಿಯಬಾರದೆಂದು ಅಧಿಕಾರಿ ವಲಯ ಹೇಳುತ್ತಿದೆ.