ಹಾಸನ, ಏ.5.ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಕ್ರಮವಾಗಿ ನಡೆಸುವ ಎಲ್ಲಾ ವೆಚ್ಚಗಳಿಗೆ ನಿಯಂತ್ರಿಸಲು ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಪಾಸಣಾ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ವೀಕ್ಷಕರಾದ ಚಂದ್ರಮೋಹನ್ ಠಾಕೂರ್ ಸೂಚಿಸಿದ್ದಾರೆ.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ವಿವಿಧ ಚುನಾವಣಾ ತಂಡಗಳ ಮುಖ್ಯಸ್ಥರ ಸಭೆ ನಡೆಸಿ ಅವರು ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚುವೆಚ್ಚಗಳು ನಿಯಮಾನುಸಾರವೇ ನಡೆಯಬೇಕು. ಬ್ಯಾಂಕ್ ಖಾತೆಯ ಮೂಲಕವೇ ಪಾವತಿಯಾಗಬೇಕು. ಅಕ್ರಮವಾಗಿ ಪಾವತಿ ಮತ್ತು ವೆಚ್ಚ ಮಾಡಲು ಅವಕಾಶ ನೀಡಬಾರದು. ಚೆಕ್ಪೋಸ್ಟ್ ತಪಾಸಣೆಯನ್ನು ಬಿಗಿಗೊಳಿಸಿ, ಅಕ್ರಮ ಸಾಗಾಟಗಳನ್ನು ನಿಯಂತ್ರಿಸಬೇಕು. ಅಕ್ರಮ ಹಣ ಮತ್ತು ಸರಕು ಸಾಗಾಟ ಕಂಡುಬಂದಕೂಡಲೇ ವಶಪಡಿಸಿ, ಚುನಾವಣಾ ಆಯೋಗಕ್ಕೆ ವರದಿ ಮಾಡಬೇಕು ಎಂದು ಅವರು ತಿಳಿಸಿದರು.
ಇವಿಎಂ ಸಾಗಾಟವನ್ನು ಬಿಗಿ ಭದ್ರತೆಯಲ್ಲಿ ಮತ್ತು ಜಿಪಿಎಸ್ ಆಧಾರಿತ ವಾಹನಗಳಲ್ಲಿ ಸಾಗಿಸಬೇಕು. ಮುಂದಿನ ದಿನಗಳಲ್ಲಿ ತಾನು ಸೂಕ್ಷ್ಮ ಮತ್ತು ಸಂಭಾವ್ಯ ಆಮಿಷಕ್ಕೊಳಗಾಗುವ ಪ್ರದೇಶಗಳು ಸೇರಿದಂತೆ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ನಿರಂತರ ಭೇಟಿ ನೀಡಲಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ತಂಡಗಳು ರಾಜಕೀಯ ಪಕ್ಷಗಳ ತಂಡಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸರ್ವರೀತಿಯ ಏರ್ಪಾಡುಗಳನ್ನು ಮಾಡಬೇಕು ಎಂದು ವೀಕ್ಷಕರಾದ ಚಂದ್ರಮೋಹನ್ ಠಾಕೂರ್ ತಿಳಿಸಿದರು.
ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕರಾಧ ವಿಕಾಸ್ ಸಿಂಗ್ ಭಗ್ರಿ ಹಾಗೂ ವೈಭವ್ ಅಗರವಾಲ್ ಮಾತನಾಡಿ, ತಪಾಸಣಾ ತಂಡಗಳನ್ನು ಇನ್ನಷ್ಟು ಹೆಚ್ಚಿಸಬೇಕು. ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಸಂಶಯಾಸ್ಪದ ವ್ಯವಹಾರ ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು. ಆದಾಯ ತೆರಿಗೆ ಇಲಾಖೆಯೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮದ್ಯ ಮಾರಾಟ ಅಂಗಡಿಗಳಲ್ಲಿ ಮಾರಾಟದಲ್ಲಿ ಒಮ್ಮಲೇ ಏರಿಕೆಯಾಗುವ ವ್ಯವಹಾರದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಗಾ ಇಡಬೇಕು. ಇತರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತಡೆಗಟ್ಟಲು ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ನಿರಂತರ ತಪಾಸಣೆ ನಡೆಸಬೇಕು. ಚೆಕ್ಪೋಸ್ಟ್ಗಳು ನಿರಂತರವಾಗಿ ಸ್ಥಳ ಬದಲಾಯಿಸಿ ತಪಾಸಣೆ ನಡೆಸಲು ವೀಕ್ಷಕರು ತಿಳಿಸಿದರು.
ಪೊಲೀಸ್ ವೀಕ್ಷಕರಾದ ದಿವ್ಯ ಸತ್ಯನ್ ಅವರು ಮಾತನಾಡಿ, ಸೂಕ್ಷ್ಮ ಮತ್ತು ಸಂಭಾವ್ಯ ಆಮಿಷಕ್ಕೊಳಗಾಗುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲು ಸೂಚಿಸಿದರು. ಸಭೆಯಲ್ಲಿ ವೀಕ್ಷಕರು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಾಚರಣೆಗಳ ಮಾಹಿತಿ ಪಡೆದರು.ಜಿಲ್ಲಾ ಚುನಾವಣಾಧಿಕಾರಿ ಸತ್ಯಭಾಮಾ ಅವರು ಕೇಂದ್ರ ವೀಕ್ಷಕರಿಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಚುನಾವಣಾ ಸಿದ್ಧತೆಗಳ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಮುಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಳಾ, ಆದಾಯ ತೆರಿಗೆ ಇಲಾಖೆ ಅಧಿಕಾರಿ ದರ್ಶನ್ ಕುಮಾರ್ ಮತ್ತಿತರರು ಇದ್ದರು.