ಸುದ್ದಿ

ಒಡಿಶಾದಲ್ಲಿ ರ‍್ಯಾಲಿ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಪತ್ರಕರ್ತ; ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಇಂದು ಒಡಿಶಾದ ಮಯೂರ್​ಭಂಜ್​ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕ ರ‍್ಯಾಲಿಯಲ್ಲೂ ಪಾಲ್ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ನೋಡಲು ಸಾವಿರಾರು ಜನರು ಸೇರಿದ್ದರು. ಮೋದಿ ಭಾಷಣ ಆರಂಭಿಸುತ್ತಿದ್ದಂತೆ ಆ ಕಾರ್ಯಕ್ರಮವನ್ನು ವರದಿ ಮಾಡಲು ಬಂದಿದ್ದ ಪತ್ರಕರ್ತರೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ನರೇಂದ್ರ ಮೋದಿ ತಮ್ಮ ಭಾಷಣವನ್ನು ನಿಲ್ಲಿಸಿ, ಆ ಪತ್ರಕರ್ತನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡುವಾಗ ಸಭೆಯಲ್ಲಿ ಸೇರಿದ್ದ ಜನರನ್ನು ಸೂಕ್ಷ್ಮವಾಗಿ ಗಮನಿಸುವ ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ ತಮ್ಮ ಭಾಷಣದ ವೇಳೆ ಮೂರ್ಛೆ ತಪ್ಪಿ ಬಿದ್ದ ಪತ್ರಕರ್ತನನ್ನು ಗಮನಿಸಿದ್ದಾರೆ. ಈ ವೇಳೆ ತಮ್ಮ ಭಾಷಣವನ್ನು ನಿಲ್ಲಿಸಿದ ಅವರು ಅವರ ವೈದ್ಯಕೀಯ ತಂಡವನ್ನು ಕರೆದು, ಆದಷ್ಟು ಬೇಗ ಆ ಪತ್ರಕರ್ತನನ್ನು ತಪಾಸಣೆ ಮಾಡಲು ಸೂಚಿಸಿದರು. ಆತನಿಗೆ ಬೇಗ ಯಾರಾದರೂ ನೀರು ಕೊಡಿ. ಅವರಿಗೆ ಗಾಳಿ ಬೇಕಾಗಿದೆ ಎಲ್ಲರೂ ಸ್ವಲ್ಪ ದೂರ ಸರಿಯಿರಿ. ನಮ್ಮ ವೈದ್ಯರ ತಂಡ ಆತನನ್ನು ತಪಾಸಣೆ ಮಾಡುತ್ತದೆ. ನೀವು ಯಾರೂ ಚಿಂತಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಸೂಚನೆಯಂತೆ ಆತನಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಮಯೂರ್‌ಭಂಜ್‌ನ ಈ ಭೂಮಿ ಮಹಿಳಾ ಸಬಲೀಕರಣದ ನಾಡು. ಇಲ್ಲಿ ಸುಭದ್ರೆ ಮಾತೆಯ ರಥವನ್ನು ಮಹಿಳೆಯರು ಮಾತ್ರ ಎಳೆಯುತ್ತಾರೆ. ಆದರೆ, ಈಗ ಮಯೂರ್‌ಭಂಜ್‌ನ ಮಗಳು ನಮ್ಮ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ದೇಶದ 3 ಸಶಸ್ತ್ರ ಪಡೆಗಳನ್ನು ಮುನ್ನಡೆಸುತ್ತಿದ್ದಾರೆ. ಇದು ಮಯೂರ್‌ಭಂಜ್‌ಗೆ ಮತ್ತು ಒಡಿಶಾಗೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button