ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಇಂದು (ಜೂನ್ 09) ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇಂದು ಸಂಜೆ 7:15ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ವಿದೇಶದ ಕೆಲವು ಅತಿಥಿಗಳ ಜೊತೆಗೆ ದೇಶದ ಹಲವು ಪ್ರಮುಖ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಕೆಲವು ದೇಶಗಳ ಪ್ರಧಾನ ಮಂತ್ರಿಗಳು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಸೆಲೆಬ್ರಿಟಿಗಳು ದೆಹಲಿ ತಲುಪಿದ್ದು ಕೆಲವೇ ಗಂಟೆಗಳಲ್ಲಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
ದಕ್ಷಿಣ ಭಾರತದಿಂದಲೂ ಕೆಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯವಾಗಿ ನಟ ರಜನೀಕಾಂತ್ ಈಗಾಗಲೇ ದೆಹಲಿ ತಲುಪಿದ್ದು, ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಜನೀಕಾಂತ್, ತಾವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದಾಗಿ ಹೇಳಿದ್ದಾರೆ. ವಿಶೇಷವೆಂದರೆ ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಸೀಟು ಸಹ ಬಂದಿಲ್ಲ.
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಜನೀಕಾಂತ್ಗೆ , ‘ನೆಹರು ಬಳಿಕ ಮೂರನೇ ಬಾರಿ ಪ್ರಧಾನಿ ಆಗುತ್ತಿರುವ ಮೋದಿ ಅವರಿಗೆ ಏನು ಹೇಳಲು ಬಯಸುತ್ತೀರವೆಂಬ ಪ್ರಶ್ನೆ ಎದುರಾಗಿದೆ. ಉತ್ತರಿಸಿರುವ ರಜನೀಕಾಂತ್, ‘ಇದೊಂದು ಐತಿಹಾಸಿಕ ಇವೆಂಟ್, ಮೂರನೇ ಬಾರಿ ಪ್ರಧಾನಿ ಆಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಶುಭಾಶಯ ತಿಳಿಸುತ್ತೇನೆ’ ಎಂದಿದ್ದಾರೆ. ರಜನೀಕಾಂತ್ ಅವರು ಈ ಹಿಂದೆಯೂ ಕೆಲವು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿ ಆಗಿದ್ದಾರೆ. ಧಾರ್ಮಿಕ ವ್ಯಕ್ತಿ ಆಗಿರುವ ರಜನೀಕಾಂತ್ಗೆ ಮೋದಿ ಕುರಿತು ಗೌರವವಿದೆ. ಇತ್ತೀಚೆಗೆ ಸಿಎಂ ಯೋಗಿ ಆದಿತ್ಯನಾಥರನ್ನು ಭೇಟಿಯಾಗಿದ್ದ ರಜನೀಕಾಂತ್ ಅವರು ಅವರ ಕಾಲಿಗೆ ನಮಸ್ಕರಿಸಿ ತೀವ್ರ ಟ್ರೋಲ್ ಆಗಿದ್ದರು.