ಬೆಂಗಳೂರು : ಸುಬ್ರಹ್ಮಣ್ಯ ಪುರ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಪ್ರಬುದ್ಧ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಸಹೋದರನ ಸ್ನೇಹಿತ 14 ವರ್ಷದ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 15 ರಂದು ಸಂಜೆ ಮನೆಯಲ್ಲಿ ಬೃಂದಾವನ ಲೇಟೌಟ್ ನಿವಾಸಿ ಪ್ರಬುದ್ಧ (20) ನಿಗೂಢವಾಗಿ ಹತ್ಯೆಯಾಗಿದ್ದಳು. ಆರಂಭದಲ್ಲಿ ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿದ್ದರು. ಬಳಿಕ ಮೃತ ಪ್ರಬುದ್ಧ ತಾಯಿ ದೂರು ಆಧರಿಸಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದರು. ಕೊನೆಗೆ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.
ಅಂತೆಯೇ ಗೆಳೆಯನ ಜತೆ ಮನೆ ಬಂದಿದ್ದಾಗ ಆತನ ಸೋದರಿ ಪ್ರಬುದ್ಧಳ ಪರ್ಸ್ನಲ್ಲಿದ್ದ 2 ಸಾವಿರವನ್ನು ಕಳವು ಮಾಡಿದ್ದಾನೆ. ಈ ಕಳ್ಳತನ ಸಂಗತಿ ತಿಳಿದ ಪ್ರಬುದ್ಧ, ಹಣ ಮರಳಿಸುವಂತೆ ಬಾಲಕನಿಗೆ ತಾಕೀತು ಮಾಡಿದ್ದಳು. ಕೊನೆಗೆ ಆರೋಪಿ ಮೇ 15ರಂದು ಮಧ್ಯಾಹ್ನ ರಸ್ತೆಯಲ್ಲಿನ ಸಿಸಿಟಿವಿಗಳಲ್ಲಿ ಕಾಣದಂತೆ ಅಕ್ಕಪಕ್ಕದ ಮನೆಯ ಟೆರೇಸ್ ಮೇಲಿಂದ ಮನೆಗೆ ಹಿಂದಿನ ಬಾಗಿಲಿನ ಮೂಲಕ ಬಂದು ಪ್ರಬುದ್ಧಳ ಬಳಿ ತಾನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡು ಆತ ಕ್ಷಮೆ ಕೋರಿದ್ದಾನೆ.
ಈ ಮಾತಿಗೆ ಆಕ್ಷೇಪಿಸಿದಾಗ ಕಾಲು ಹಿಡಿಯಲು ಆತ ಮುಂದಾಗಿದ್ದಾನೆ. ಈ ಹಂತದಲ್ಲಿ ತಳ್ಳಾಟದಲ್ಲಿ ಪ್ರಬುದ್ಧ ಕೆಳಗೆ ಬಿದ್ದು ಪ್ರಜ್ಞಾಹೀನಾಳಾಗಿದ್ದಾಳೆ. ಈ ಅವಕಾಶವನ್ನು ಬಳಸಿಕೊಂಡ ಆತ, ಪ್ರಬುದ್ಧಳ ಕುತ್ತಿಗೆ ಹಾಗೂ ಕೈಯನ್ನು ಚಾಕುವಿನಿಂದ ಕುಯ್ದು ಮನೆಯಿಂದ ಓಡಿ ಹೋಗಿದ್ದಾನೆ. ಸದ್ಯ ಸುಬ್ರಮಣ್ಯಪುರ ಪೊಲೀಸರಿಂದ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಈ ಹಿಂದೆ ಮೂರು ಬಾರಿ ಚಾಕುವಿನಿಂದ ಕೈ ಕುಯ್ದುಕೊಂಡು ಪ್ರಬುದ್ಧ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಸಂಗತಿಯನ್ನು ತನ್ನ ಗೆಳೆಯನಮುಂದೆ ಆಕೆಯ ಸೋದರ ಹೇಳಿಕೊಂಡಿದ್ದ. ಹೀಗಾಗಿಯೇ ಪ್ರಬುದ್ಧಳಿಗೆ ಕೈ ಮತ್ತು ಕುತ್ತಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಎಂದು ಬಿಂಬಿಸಲು ಆತ ಯತ್ನಿಸಿದ್ದ. ಅಂತೆಯೇ ಸಂಚು ರೂಪಿಸಿ ಆತ ಕಾರ್ಯಗತಗೊಳಿಸಿದ್ದ ಎಂದು ಮೂಲಗಳು ಹೇಳಿವೆ.


