ಸಿನಿಮಾಸುದ್ದಿ

ಶಿವಾಜಿ ಕುರಿತ ಹಿಂದಿ ಸಿನಿಮಾದಲ್ಲಿ ದಕ್ಷಿಣ ಸ್ಟಾರ್ ನಟ ಔರಂಗಾಜೇಬ್

ಬೆಂಗಳೂರು : ಬಾಲಿವುಡ್​ನಲ್ಲಿ ವ್ಯಕ್ತಿಗಳ ಜೀವನ ಆಧರಿಸಿದ ಸಿನಿಮಾಗಳು ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಬಯೋಗ್ರಫಿ ಸಿನಿಮಾಗಳ ಬಳಿಕ ಐತಿಹಾಸಿಕ ಸಿನಿಮಾಗಳ ಟ್ರೆಂಡ್ ಸಹ ನಡೆಯುತ್ತಲೇ ಬಂದಿದೆ. ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’, ಅಜಯ್ ದೇವಗನ್​ರ ‘ತಾನಾಜಿ’, ‘ಪಾಣಿಪತ್’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಇನ್ನೂ ಕೆಲವು ಸಿನಿಮಾಗಳು ಗಮನ ಸೆಳೆದಿವೆ. ಇದೀಗ ಛತ್ರಪತಿ ಶಿವಾಜಿ ಕುರಿತಾದ ‘ಶಿವಾಜಿ’ ಸಿನಿಮಾ ಸೆಟ್ಟೇರಲು ಸಜ್ಜಾಗಿದ್ದು, ಸಿನಿಮಾದಲ್ಲಿ ಔರಂಗಾಜೇಬನ ಪಾತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಅಕ್ಷಯ್ ಕುಮಾರ್ ನಟಿಸಿದ್ದ ‘ಓಎಂಜಿ 2’ ಸಿನಿಮಾ ನಿರ್ದೇಶನ ಮಾಡಿದ್ದ ಅಮಿತ್ ರಾಯ್, ಶಿವಾಜಿ ಕುರಿತಾದ ಹೊಸ ಸಿನಿಮಾ ಪ್ರಾರಂಭ ಮಾಡುತ್ತಿದ್ದು, ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸಲಿದ್ದಾರೆ. ಸಿನಿಮಾವನ್ನು ವಾಕೋ ಫಿಲಮ್ಸ್ ಮತ್ತು ತೆಲುಗಿನ ನಿರ್ಮಾಪಕ ದಿಲ್ ರಾಜು ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ನಾಯಕನಾಗಿ ಶಾಹಿದ್ ಕಪೂರ್ ಆಯ್ಕೆ ಆಗಿದ್ದಾರೆ. ಆದರೆ ಔರಂಗಾಜೇಬನ ಪಾತ್ರಕ್ಕೆ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರನ್ನು ಕೇಳಲಾಗಿದೆ.

‘ಬಾಹುಬಲಿ’ ಸಿನಿಮಾದಲ್ಲಿ ಬಲ್ಲಾಳದೇವನಾಗಿ ಮಿಂಚಿರುವ ಬಹುಭಾಷಾ ನಟ, ನಿರ್ಮಾಪಕ ರಾಣಾ ದಗ್ಗುಬಾಟಿಯನ್ನು ಔರಂಗಾಜೇಬನ ಪಾತ್ರದಲ್ಲಿ ನಟಿಸುವಂತೆ ಕೇಳಲಾಗಿದೆ. ಅಮಿತ್ ರಾಯ್, ಔರಂಗಾಜೆಬನ ಪಾತ್ರಕ್ಕೆ ರಾಣಾ ದಗ್ಗುಬಾಟಿಯೇ ಸೂಕ್ತ ಎಂದಿರುವ ಕಾರಣ ಈಗಾಗಲೇ ಎರಡು ಬಾರಿ ರಾಣಾ ದಗ್ಗುಬಾಟಿಯ ಬಳಿ ಸಿನಿಮಾದ ವಿಷಯವಾಗಿ ಮಾತುಕತೆ ಮಾಡಲಾಗಿದೆ. ಆದರೆ ರಾಣಾ ಒಪ್ಪಿಕೊಂಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಖಾತ್ರಿಯಿಲ್ಲ.

ರಾಣಾ ದಗ್ಗುಬಾಟಿ ‘ಬಾಹುಬಲಿ’ ಸಿನಿಮಾದ ಹೊರತಾಗಿ ಇನ್ಯಾವುದೇ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದಿಲ್ಲ. ನಾಯಕ ನಟನಾಗಿಯೇ ನಟಿಸಿದ್ದಾರೆ. ಅಥವಾ ತುಸುವೇ ಗ್ರೇ ಶೇಡ್​ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈಗ ಪರಭಾಷೆಯ ಸಿನಿಮಾದಲ್ಲಿ ಪರಿಪೂರ್ಣ ವಿಲನ್ ಪಾತ್ರದಲ್ಲಿ ನಟಿಸಲು ಒಪ್ಪುತ್ತಾರೆಯೇ ಎಂಬುದು ಕುತೂಹಲದ ವಿಷಯ.

ಶಾಹಿದ್ ಕಪೂರ್ ಈ ಹಿಂದೆ ‘ಪದ್ಮಾವತ್’ ಸಿನಿಮಾದಲ್ಲಿ ರಾಜಾ ರತನ್ ಸಿಂಗ್ ಪಾತ್ರದಲ್ಲಿ ನಟಸಿದ್ದರು. ಇದೀಗ ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೂ ಹಿಂದೆ ‘ರಂಗೂನ್’ ಹೆಸರಿನ ಎರಡನೇ ವಿಶ್ವಯುದ್ಧದ ಸಮಯದ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ರಾಣಾ ದಗ್ಗುಬಾಟಿ ಸಹ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ನಿರ್ಮಾಪಕರೂ ಆಗಿರುವ ರಾಣಾ ಕೆಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ.

Comments (0)

Your email address will not be published. Required fields are marked *

Back to top button