ಚಿಕ್ಕೋಡಿ : ಕಾರ್ ಮೇಲೆ ಮಿಡಿಯಾ ಎಂದು ಬರೆಸಿಕೊಂಡು ಸ್ಮಗ್ಲಿಂಗ್ ಮಾಡುತ್ತಿರುವಂತಹ ಘಟನೆ ನಡೆದಿದೆ. ಮಿಡಿಯಾ ಎಂದು ಬರೆದರೇ ಯಾರು ತಡೆಯುವದಿಲ್ಲ ಎನ್ನುವ ಆಲೋಚನೆಯಲ್ಲಿದ್ದಂತಹ ಗ್ಯಾಂಗ್ ಹುಕ್ಕೇರಿ ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆಯಲ್ಲಿ ಸಿಕ್ಕಿಕೊಂಡಿದ್ದಾರೆ.
40 ಕೆಜಿ ಶ್ರೀಗಂಧ ಹಾಗೂ ಕಳ್ಳ ಸಾಗಾಟಕ್ಕೆ ಬಳಿಸಿದ್ದ ಕಾರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ಶ್ರೀಗಂಧ ಕಳ್ಳ ಸಾಗಾಟ ಮಾಡುತ್ತಿದ್ದ ನಕಲಿ ಪತ್ರಕರ್ತರು ಪರಾರಿಯಾಗಿದ್ದಾರೆ.
ಪರಸಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಕಾರಿನಲ್ಲಿ ಪುಂಡಲಿಕ ಭಜಂತ್ರಿ ಎಂಬುಬರ ನಕಲಿ ಯೂಟ್ಯೂಬ್ ಐಡಿ ಪತ್ತೆಯಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ನಕಲಿ ಯೂಟ್ಯೂಬ್ ವರದಿಗಾರರ ಹಾವಳಿ ಹೆಚ್ಚಾಗಿದೆ.
ನಕಲಿ ಯೂ ಟ್ಯೂಬ್ ವರದಿಗಾರರ ಹಾವಳಿಗೆ ಅಧಿಕಾರಿಗಳು ಸಾರ್ವಜನಿಕರು ರೋಸಿ ಹೋಗಿದ್ದಾರೆ. ನಕಲಿ ಪತ್ರಕರ್ತರ ಹಾವಳಿಯಿಂದ ಅಸಲಿ ಪತ್ರಕರ್ತರು ಮುಜುಗರ ಪಡುವಂತಾಗಿದೆ. ಬೆಳಗಾವಿ ಜಿಲ್ಲೆಯ ಬಹುತೇಕ ವಾಹನಗಳ ಮೇಲೆ ಮಿಡಿಯಾ ಎನ್ನುವ ಫಲಕಗಳನ್ನು ಅಳವಡಿಕೆ ಮಾಡಲಾಗಿದ್ದು ನಕಲಿ ಪತ್ರಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.