ವಿಜಯಪುರ : ನಾಲ್ಕು ವರ್ಷಗಳ ನಂತರ ಮತ್ತೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಐಎಎಸ್ ಅಧಿಕಾರಿ ಕೆ.ಪಿ.ಮೋಹನರಾಜ್ ಅವರು ಜ.5 ಮತ್ತು 6 ರಂದು ಎರಡು ದಿನಗಳ ಕಾಲ ಆಲಮಟ್ಟಿ ಮತ್ತು ನಾರಾಯಣಪುರ ವಲಯದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಜೊತೆಗೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆಯ ಭೂಸ್ವಾಧೀನ, ಪುನರ್ವಸತಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಈ ಮೊದಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿರುವ ಇವರ ಅಧಿಕಾರವಧಿಯಲ್ಲಿ ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಕಾಮಗಾರಿಗಳು, ಆಲಮಟ್ಟಿ ಜಲಾಶಯವನ್ನು 524 ಮೀಟರಿಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಗ್ರಾಮಗಳ ಸ್ಥಳಾಂತರ ಪ್ರಕ್ರಿಯೆ, ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳ್ಳಬಹದೆಂದು ಈ ಭಾಗದ ಸಂತ್ರಸ್ತರು, ಜನರಲ್ಲಿ ಆಶಾಭಾವನೆ ಮೂಡಿದೆ.
ಕಳೆದ ನಾಲ್ಕು ವರ್ಷಗಳ ಕಾಲ ಕೆಬಿಜೆಎನ್ಎಲ್ ಎಂಡಿ ಹುದ್ದೆಗೆ ಭಡ್ತಿ ಪಡೆದ ಇಂಜಿನಿಯರ್ ಗಳನ್ನೇ ಈ ಹುದ್ದೆಗೆ ನೇಮಿಸಲಾಗುತ್ತಿತ್ತು. ಆದರೆ ಈಗ ಈ ಮೊದಲು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅನುಭವಿ ಐಎಎಸ್ ಅಧಿಕಾರಿ ಕೆ.ಪಿ.ಮೋಹನರಾಜ್ ಅವರನ್ನು ಸರ್ಕಾರ ಮತ್ತೆ ಕೆಬಿಜೆಎನ್ಎಲ್ ಎಂಡಿ ಹುದ್ದೆಯ ಜವಾಬ್ದಾರಿ ನೀಡಿದ್ದು, ಆಲಮಟ್ಟಿ ಹಾಗೂ ನಾರಾಯಣಪುರ ವಲಯಗಳಲ್ಲಿ ಹಾಗೂ ಮುಳುಗಡೆ ಪ್ರದೇಶ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿವೆ ಎಂಬ ಆಶಾದಾಯಕ ಮಾತು ಅಧಿಕಾರಿವಲಯ ಹಾಗೂ ಜನರಲ್ಲಿ ಕೇಳಿಬರುತ್ತಿದೆ.