ತುಮಕೂರು: ಮಾಗಡಿ ತಾಲೂಕಿನವರೇ ಆಗಿರುವ ಭಾರತೀಯ ಕ್ರಿಕೆಟ್ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಕೆ.ಎಲ್. ರಾಹುಲ್ ಅವರೊಂದಿಗೆ ತಂದೆ ಲೋಕೇಶ್, ತಾಯಿ ಲೋಕೇಶ್ವರಿ ಕೂಡ ಬಂದಿದ್ದರು.
ವಿಷಯ ತಿಳಿದು ಸಾವಿರಾರು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಜನರು ಶ್ರೀಮಠಕ್ಕೆ ಆಗಮಿಸಿದ್ದರು. ಮಠಕ್ಕೆ ಆಗಮಿಸಿದ್ದ ರಾಹುಲ್ ಅವರನ್ನು ಕಣ್ತುಂಬಿಕೊಂಡರು.
ಈ ವೇಳೆ, ಮುಗಿಬಿದ್ದ ಜನರನ್ನು ನಿಯಂತ್ರಿಸಲು ಮಠದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ರಾಹುಲ್ ತಂದೆ ಲೋಕೇಶ್ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕಣ್ಣೂರು ಮೂಲದವರಾಗಿದ್ದಾರೆ. ಅವರು ಸಿದ್ಧಗಂಗಾ ಮಠದ ಭಕ್ತರಾಗಿದ್ದಾರೆ.
ಸಿದ್ಧಲಿಂಗ ಸ್ವಾಮೀಜಿ ಅವರ ಪೂರ್ವಾಶ್ರಮದ ಊರು ಕೂಡ ರಾಮನಗರ ಜಿಲ್ಲೆಯೇ ಆಗಿದ್ದು, ಈ ಸಮಯದಲ್ಲಿ ಪರಸ್ಪರ ಮಾತುಕತೆಯಲ್ಲಿ ತೊಡಗಿದರು. ಅಲ್ಲದೇ ರಾಹುಲ್ ಅವರ ಚಿಕ್ಕಪ್ಪ ಸಿದ್ಧಗಂಗಾ ಮಠದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಮಠದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಕೆ. ಎಲ್. ರಾಹುಲ್ ಅವರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.