ನವದೆಹಲಿ : ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ಬಗ್ಗೆ ಐಪಿಎಸ್ ಅಧಿಕಾರಿ ಡಿ. ರೂಪಾ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸುಪ್ರೀಂ ಕೋರ್ಟ್ನಲ್ಲಿ ಬಿಗಿಪಟ್ಟು ಹಿಡಿದಿದ್ದಾರೆ.
ಡಿ.ರೂಪಾ ವಿರುದ್ಧಸಲ್ಲಿಸಿದ್ದಮಾನನಷ್ಟ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ರೋಹಿಣಿ ಸಿಂಧೂರಿ ಪರ ವಕೀಲರು, ತಮ್ಮ ಕಕ್ಷಿದಾರರ ವಿರುದ್ದ ಮಾನಹಾನಿಕಾರ ರೀತಿಯ ಪೋಸ್ಟ್ಗಳನ್ನು ಮಾಡಲಾಗಿದೆ. ಮಾಡದ ತಪ್ಪಿಗೆ ಅವಮಾನ ಅನುಭವಿಸಿರೋ ಸಿಂಧೂರಿಗೆ ಅವರ ಬಳಿ ಡಿ. ರೂಪಾ ಬಹಿರಂಗವಾಗಿ ಬೇಷರತ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಪ್ರತಿವಾದ ಮಂಡಿಸಿದ ಡಿ.ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಸಹ ನಮ್ಮ ಕಕ್ಷಿದಾರರ ವಿರುದ್ಧ ಆರೋಪ ಮಾಡಿದ್ದಾರೆ. ಬುದ್ದಿ ಭ್ರಮಣೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು. ‘ಬುದ್ಧಿ ಭ್ರಮಣೆಯಾದವರು ಮಾತ್ರ ಇಂಥ ಪೋಸ್ಟ್ ಮಾಡುತ್ತಾರೆ. ಬುದ್ದಿಭ್ರಮಣೆಯಾಗಿದೆ ಎಂದು ಹೇಳಿಲ್ಲ,” ಎಂದು ಸಿಂಧೂರಿ ಪರ ವಕೀಲರು ಪ್ರತ್ಯುತ್ತರ ನೀಡಿದರು.
“ಅವಹೇಳನಕಾರಿ ಪೋಸ್ಟ್ಗಳನ್ನು ಡಿಲೀಟ್ ಮಾಡಿದ ಮಾತ್ರಕ್ಕೆ ತಪ್ಪು ಸರಿ ಹೋಗುವುದಿಲ್ಲ, ನನ್ನ ಕುಟುಂಬ ಅನುಭವಿಸಿದ ನೋವಿಗೆ ನ್ಯಾಯ ಸಿಗಬೇಕಿದೆ. ಆರೋಪ ಹೊತ್ತು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ? ಹೀಗಾಗಿ ಡಿ. ರೂಪಾ ಕ್ಷಮೆ ಕೇಳಬೇಕು,” ಎಂದು ರೋಹಿಣಿ ಸಿಂಧೂರಿ ಪಟ್ಟು ಹಿಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾ.ಎ.ಎಸ್ ಓಕಾ, ಫೆ.16ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು. ನಿಮ್ಮ ಜಗಳ ಪರಿಹರಿಸಿಕೊಳ್ಳಲು ಒಂದು ತಿಂಗಳ ಸಮಯ ನೀಡಲಾಗುವುದು, ಅಲ್ಲಿಯ ತನಕ ಮಧ್ಯಂತರ ಆದೇಶ ಮುಂದುವರಿಯಲಿದೆ. ಯಾರು ಯಾರ ವಿರುದ್ಧವೂ ಆರೋಪ ಪ್ರತ್ಯಾರೋಪ ಮಾಡಬಾರದು. ಸೋಶಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಮಾಡಬಾರದು ಎಂದು ನ್ಯಾಯಾಧೀಶರು ತಾಕೀತು ಮಾಡಿದರು.