ಕೊಡಗಿನ ಬೆಡಗಿ, ನ್ಯಾಶನಲ್ ಕ್ರಶ್’ ಖ್ಯಾತಿಯ ರಶ್ಮಿಕಾ ಮಂದಣ್ಣ ಸಂಚರಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ರಶ್ಮಿಕಾ ಜತೆ ಈ ವೇಳೆ ನಟಿ ಶ್ರದ್ಧಾ ದಾಸ್ ಕೂಡ ಇದ್ದರು.
ಘಟನೆ ಬಗ್ಗೆ ನಟಿ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ “ಇಂದು ನಾವು ಸಾವಿನಿಂದ ಪಾರಾಗಿದ್ದೇವೆ” ಎಂದು ಬರೆದುಕೊಂಡಿದ್ದು, ಈ ಸ್ಟೋರಿ ಭಾರಿ ವೈರಲ್ ಆಗಿದೆ. ಇನ್ನು ಇದನ್ನು ನೋಡಿದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಶ್ಮಿಕಾ ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದರು. ಬಳಿಕ ತಮ್ಮ ಚಿತ್ರೀಕರಣ ಪೂರ್ಣಗೊಳಿಸಿ ಶನಿವಾರ ಹೈದರಾಬಾದ್ಗೆ ವಾಪಸ್ಸಾಗಲು ರಶ್ಮಿಕಾ ಏರ್ ವಿಸ್ತಾರ ವಿಮಾನ ಹತ್ತಿದ್ದು, ಈ ವಿಮಾನ ತಾಂತ್ರಿಕ ಸಮಸ್ಯೆ ಹಿನ್ನೆಲೆ ಮುಂಬೈ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ.
ತುರ್ತು ಭೂಸ್ಪರ್ಶದ ವೇಳೆ ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ, ರಶ್ಮಿಕಾ ಹಾಗೂ ಶ್ರದ್ಧಾ ತಮ್ಮ ಕಾಲುಗಳಿಂದ ಎದುರಿನ ಸೀಟ್ ನ ಹಿಂಬದಿಯನ್ನು ಜೋರಾಗಿ ಒತ್ತಿ ಹಿಡಿದುಕೊಂಡಿದ್ದಾರೆ. ಈ ಫೋಟೋವನ್ನು ರಶ್ಮಿಕಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.