Wednesday, April 30, 2025
24 C
Bengaluru
LIVE
ಮನೆಕ್ರೈಂ ಸ್ಟೋರಿಮಂಗಳೂರು ಪಾತಕಿ ಕಾಲಿಗೆ ಗುಂಡು.. ಯಾರಿವನು ಆಕಾಶ್ ಭವನ್ ಶರಣ್..?

ಮಂಗಳೂರು ಪಾತಕಿ ಕಾಲಿಗೆ ಗುಂಡು.. ಯಾರಿವನು ಆಕಾಶ್ ಭವನ್ ಶರಣ್..?

ಮಂಗಳೂರು : ಭೂಗತ ಲೋಕ ಅಂದ್ರೆ ಮಂಗಳೂರು, ಮಂಗಳೂರು ಅಂದ್ರೆ ಭೂಗತಲೋಕ ಅನ್ನುವ ಕಾಲವೊಂದಿತ್ತು. ರಾಜ್ಯದ ಅಂಡರ್‌ವಲ್ಡ್‌ಗೆ ಆಧುನಿಕ ಟಚ್‌ ಕೊಟ್ಟ ಇತಿಹಾಸ ಕರಾವಳಿಗರದ್ದು, ಇಲ್ಲಿನ ಭೂಗತ ಪಾತಕಿಗಳು ಮಂಗಳೂರು ಮಾತ್ರವಲ್ಲ. ಬೆಂಗಳೂರು, ಮುಂಬೈ ಹಾಗೂ ಗಲ್ಫ್‌ ದೇಶಗಳಲ್ಲಿ ತಮ್ಮದೇ ಲಿಂಕ್‌ ಮೂಲಕ ಭೂಗತ ಲೋಕವನ್ನು ಆಳಿ ಅಳಿದವರು ಇದ್ದಾರೆ. ಕಳೆದ ಎರಡು ದಶಕದಿಂದ ಕರಾವಳಿ ಅಂತಹ ರಕ್ತ ಸಿಕ್ತ ಅಧ್ಯಾಯವನ್ನೇ ನೋಡಿಲ್ಲ.


ಇದೀಗ ಮತ್ತೆ ಅಂತಹ ಲೋಕ ಸೃಷ್ಟಿಸಿ ಭೂಗತ ಜಗತ್ತಿಗೆ ಡಾನ್‌ ಆಗುವ ತವಕದಲ್ಲಿದ್ದ ಕುಖ್ಯಾತ ರೌಡಿಶೀಟರ್‌ ಆಕಾಶಭವನ ಶರಣ್‌ ಕಾಲಿಗೆ ಪೊಲೀಸ್ರು ಗುಂಡಾಕುವ ಮೂಲಕ ರೌಡಿಗಳೇ ಬಾಲ ಬಿಚ್ಚೀರಾ ಹುಷಾರ್ ಎಂಬ ಎಚ್ಚರಿಕೆ ಸಂದೇಶವನ್ನ ಕೊಟ್ಟಿದ್ದಾರೆ..

ನಟೋರಿಯಸ್ ರೌಡಿ ಆಕಾಶಭವನ್ ಶರಣ್ ಮೇಲೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. ಮಂಗಳೂರಿನ ಜಪ್ಪು ಕುದ್ಪಾಡಿಯಲ್ಲಿ ಸಾಗುತ್ತಿದ್ದಾಗ ಪೊಲೀಸರು ಬಂಧಿಸಲು ಯತ್ನಿಸಿದ್ದು ಮರು ದಾಳಿಗೆ ಯತ್ನಿಸಿದ್ದಾನೆ ಎನ್ನಲಾಗುತ್ತಿದ್ದು, ಈ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ.

ಶರಣ್ ನನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ.5ರಂದು ರಾತ್ರಿ ಮಂಗಳೂರಿನ ಸಿಸಿಬಿ ಪೊಲೀಸರು ಕಾವೂರಿನಲ್ಲಿ ರೌಡಿಯನ್ನು ಹಿಡಿಯಲು ಯತ್ನಿಸಿದಾಗ ಕಾರನ್ನು ಹಾಯಿಸಿ ಕೊಲೆಗೆ ಯತ್ನಿಸಿದ ಬಗ್ಗೆ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆನಂತರ, ಆಕಾಶಭವನ್ ಶರಣ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಮಂಗಳವಾರ ಮಧ್ಯಾಹ್ನ ಆರೋಪಿ ಜಪ್ಪು ಕುದ್ಪಾಡಿಯಲ್ಲಿದ್ದಾನೆಂದು ವಶಕ್ಕೆ ಪಡೆಯಲು ಮುಂದಾಗಿದ್ದರು ಎನ್ನುವ ಮಾಹಿತಿಗಳಿವೆ.

ಯಾರಿವನು ಆಕಾಶ್ ಭವನ್ ಶರಣ್?
ಪೊಲೀಸ್‌ ದಾಖಲೆಗಳೇ ಹೇಳುವಂತೆ ಸರಿಸುಮಾರು ಕಳೆದ ಒಂದೂವರೆ ದಶಕದಿಂದ ಮಂಗಳೂರಿನ ಇತಿಹಾಸದಲ್ಲಿ ಅತೀ ಹೆಚ್ಚು ಕ್ರೈಂ ಬ್ಯಾಕ್‌ಹಿಸ್ಟರಿ ಇರುವ ಕಿರಾತಕ ಅಂದ್ರೆ ಅದು ಆಕಾಶಭವನ ಶರಣ್‌. ಈವರೆಗೆ 22 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆಕಾಶಭವನ ಶರಣ್‌ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೇಲ್‌ ಮೂಲಕ ರಿಲೀಸ್‌ ಆಗಿದ್ದ. ಈತ ಹೊರಬರುತ್ತಿದ್ದಂತೆ ಉಳಿದ ಪ್ರಕರಣದ ಅರೆಸ್ಟ್‌ ವಾರಂಟ್‌ ಮೇಲೆ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಆದರೆ ಈತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮಂಗಳೂರು, ಉಡುಪಿ, ಬೆಂಗಳೂರು ಅಂತ ಸುತ್ತಾಡುತ್ತಿದ್ದನಂತೆ.

ಒಮ್ಮೊಮ್ಮೆ ಮಂಗಳೂರಿನ ಆಕಾಶಭವನದ ಮನೆಗೆ ಮಧ್ಯರಾತ್ರಿ ಬಂದು ಬೆಳ್ಳಂಬೆಳಗ್ಗೆ ಜಾಗ ಖಾಲಿ ಮಾಡುತ್ತಿದ್ದ. ಆದರೆ ಈತನ ಚಲನವಲನದ ಮೇಲೆ ಮಂಗಳೂರು ಖಾಕಿಪಡೆಯ ಹದ್ದಿನ ಕಣ್ಣು ಬಿದ್ದಿದ್ದು, ಶರಣ್‌ಗೆ ಗೊತ್ತೇ ಇರಲಿಲ್ಲ. ಮಂಗಳೂರು ನಗರ ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರೀಡ್ಜ್ ಬಳಿಯಲ್ಲಿ, ಕಳೆದ ಡಿ.8 ರಂದು ರಾತ್ರಿ 11-30 ರ ಸುಮಾರಿಗೆ ಹಳೆಯಂಗಡಿ ನಿವಾಸಿಯೊಬ್ಬರು ದ್ವಿ ಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ಮೊಬೈಲ್ ಫೋನ್, 3000 ರೂಪಾಯಿ ನಗದು ಹಾಗೂ ಟಿವಿಎಸ್ ದ್ವಿಚಕ್ರವನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದರ ತನಿಖೆ ನಡೆಸುತ್ತಿದ್ದ ವೇಳೆ ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್‌ನಿಂದ ಈತ ಮತ್ತೋರ್ವ ರೌಡಿ ಶೀಟರ್‌ಗೆ ಕಾಲ್‌ ಮಾಡಿ ಕೊಲೆ ಬೆದರಿಕೆ ಹಾಕಿದ ವಿಷಯ ಪೊಲೀಸರಿಗೆ ದೊರೆಯುತ್ತದೆ. ಜೊತೆಗೆ ಆತನ ಕೊಲೆಗೆ ಸ್ಕೆಚ್‌ ಸಹ ಹಾಕಿದ್ದಾನೆ ಎಂಬ ಅಂಶ ಬಯಲಾಗುತ್ತದೆ. ವಿಶೇಷ ಎಂದರೆ ಆತ ಯಾವ ರೌಡಿ ಶೀಟರ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೋ ಅದೇ ಗುಂಪಿನಲ್ಲಿ ಈ ಹಿಂದೆ ಆಕಾಶಭವನ್‌ ಶರಣ್‌ ಗುರುತಿಸಿಕೊಂಡಿದ್ದನು. ಆದ್ರೆ ಅದ್ಯಾಕೋ ಆತನಿಗೆ ಅಲ್ಲಿ ಸರಿಬಂದಿರಲಿಲ್ಲ. ಆ ಕಾರಣಕ್ಕೆ ಶರಣ್‌ ಆ ಗುಂಪಿನಿಂದ ಹೊರಬಂದು ತನ್ನದೇ ಗ್ಯಾಂಗ್‌ ಕಟ್ಟಿಕೊಂಡಿದ್ದ. ಇದೀಗ ಅದೇ ಗುಂಪಿನ ರೌಡಿಶೀಟರ್‌ಗೆ ಮೊಬೈಲ್‌ ಮೂಲಕ ಕೊಲೆ ಬೆದರಿಕೆ ಹಾಕಿ ತಾನು ತೋಡಿದ್ದ ಖೆಡ್ಡಾಕ್ಕೆ ಬಿದ್ದಿದ್ದಾನೆ.

ಈತನ ಮೇಲಿತ್ತು ಬರೋಬ್ಬರಿ 22 ಕೇಸ್‌
ಆಕಾಶ್‌ ಭವನ ಶರಣ್‌ ಮೇಲೆ ಮಂಗಳೂರು ನಗರ ಕಮೀಷನರೇಟ್, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯಲ್ಲಿ ಸೇರಿ ಒಟ್ಟು 22 ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 6 ಕೊಲೆ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್ ಡಿ ಪಿ ಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ಸೇರಿವೆ. ಇದಲ್ಲದೆ ಇನ್ನೂ ಹಲವು ಪ್ರಕರಣಗಳು ಶರಣ್‌ ಮೇಲೆ ದಾಖಲಾಗುವ ಸಾಧ್ಯತೆ ಇದೆ. ಕಾರಣ ಕೆಲವು ಕೃತ್ಯಗಳಲ್ಲಿ ಸಂತ್ರಸ್ತರು ಶರಣ್‌ ಭಯದಿಂದ ಮುಂದೆ ಬಂದು ದೂರು ನೀಡುವ ಧೈರ್ಯ ಮಾಡಿರಲಿಲ್ಲ. ಆದರೆ ಇದೀಗ ಮಂಗಳೂರು ನಗರ ಪೊಲೀಸ್‌ ಆಯಕ್ತರು ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೂರು ದಾಖಲಿಸುವ ಸಾಧ್ಯತೆಗಳಿವೆ.

ಕೇಸುಗಳ ದೊಡ್ಡ ಪಟ್ಟಿಯೇ ಇದೆ..!
2003 ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಎಲ್‌.ಗೇಟ್ ಬಳಿಯಲ್ಲಿ ರಿಕ್ಷಾ ಚಾಲಕ ಫಾರೂಕ್ ಕೊಲೆ ಪ್ರಕರಣ.
2011ರಲ್ಲಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೆವಿಜಿ ಕಾಲೇಜ್ ಕ್ಯಾಂಪಸ್ ಪರಿಸರದಲ್ಲಿ ಕೆವಿಜಿ ಆಡಳಿತಾಧಿಕಾರಿ ರಾಮಕೃಷ್ಣ ಎಂಬವರ ಕೊಲೆ ಪ್ರಕರಣ.
2012 ರಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶಭವನ ನಿವಾಸಿ ಕುಮಾರ್ ಕೊಲೆ ಪ್ರಕರಣ. 2013 ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾದಲ್ಲಿ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣ.
2015 ರಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಮಾಡೂರು ಯೂಸುಫ್ ಎಂಬಾತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶರಣ್‌ ನೇರವಾಗಿ ಭಾಗಿಯಾಗಿದ್ದ ಅಂಶ ಬಯಲಾಗಿತ್ತು.
2020 ರಲ್ಲಿ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಈತನ ನೇರ ಕೈವಾಡ ಇದೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಈ ಕೊಲೆಯು ನಡೆಯುವ ಸಮಯ ಈತನು ಪರಪ್ಪನ ಅಗ್ರಹಾರಲ್ಲಿದ್ದು, ತನ್ನ ಸಹಚರರ ಮೂಲಕ ಈ ಕೊಲೆಯನ್ನು ನಡೆಸಿರುವುದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಸಹ ತೆರೆಯಲಾಗಿದೆ.
ಇಷ್ಟೆಲ್ಲಾ ಪ್ರಕರಣಗಳು ಶರಣ್‌ ಮೇಲಿದ್ದರೂ ಕಳೆದ ವರ್ಷ ನ.11 ರಂದು ಬೆಂಗಳೂರು ಪರಪ್ಪನ ಅಗ್ರಹಾರ ಜೈಲ್ ನಿಂದ ನಿರಾಯಾಸವಾಗಿ ಜಾಮೀನಿನ ಮೇಲೆ ಹೊರಬಂದಿದ್ದನು. ಮತ್ತೆ ಅದೇ ಹಿಂದಿನ ಚಾಳಿ ಮುಂದುವರೆಸಿದ್ದ.

ಕರಾವಳಿ ಭೂಗತ ಲೋಕದ ಡಾನ್‌ ಆಗಲು ಬಯಸಿದ್ದ ಶರಣ್‌
ರೋಹಿತ್‌ದಾಸ್‌ ಅಲಿಯಾಸ್‌ ಆಕಾಶಭವನ ಶರಣ್‌ಗೆ ಕರಾವಳಿಯ ಭೂಗತ ಲೋಕದ ಅನಭಿಷಿಕ್ತ ದೊರೆಯಾಗಬೇಕು ಒಂದು ಆಸೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಕರಾವಳಿಯಲ್ಲಿ ಫೀಲ್ಡಲ್ಲಿದ್ದು, ರೌಡಿಸಂ ಮಾಡುವ ತಾಕತ್ತು ಯಾರಿಗಿರಲಿಲ್ಲ. ಕಾರಣ ಮಂಗಳೂರು ಪೊಲೀಸರ ಕಾರ್ಯದಕ್ಷತೆ ಮತ್ತು ಕಟ್ಟು ನಿಟ್ಟಿನ ಕ್ರಮಗಳು ಅಂಡರ್‌ವಲ್ಡ್‌ ಚಟುವಟಿಕೆಗಳನ್ನು ಸಂಪೂರ್ಣ ಅಳಿಸಿ ಹಾಕಿತ್ತು. ಇದರ ಪರಿಣಾಮ ಕರಾವಳಿಯಲ್ಲಿ ಕಳೆದೆರಡು ದಶಕದಿಂದ ದೊಡ್ಡ ಮಟ್ಟದ ರಕ್ತ ಹರಿದಿರಲಿಲ್ಲ. ಸುಪಾರಿ ಕಿಲ್ಲಿಂಗ್‌, ರೌಡಿಸಂ, ಶೂಟೌಟ್‌, ಉದ್ಯಮಿಗಳಿಗೆ ಹಫ್ತಾಕ್ಕಾಗಿ ಬೆದರಿಕೆ ಮುಂತಾದ ಕುಕೃತ್ಯಗಳಿಗೆ ಫುಲ್‌ಸ್ಟಾಪ್‌ ಬಿದ್ದಿತ್ತು. ಇದನ್ನೇ ಅವಕಾಶವಾಗಿ ಬಳಸಿ ತಾನು ರೌಡಿ ಗ್ಯಾಂಗ್‌ ಕಟ್ಟಬೇಕು. ಆ ಮೂಲಕ ಅಂಡರ್‌ವಲ್ಡ್‌ನ ಸಿಂಹಾಸನದಲ್ಲಿ ಆಸೀನರಾಬೇಕು ಎಂದು ಕನಸು ಕಂಡಿದ್ದ ಶರಣ್‌. ಅದಕ್ಕಾಗಿ ಹೊರದೇಶಗಳಲ್ಲಿ ಕರಾವಳಿಯ ಇರುವ ಭೂಗತ ಪಾತಕಿಗಳ ಜೊತೆ ಕೈಜೋಡಿಸುವ ಬಗ್ಗೆ ಫೋನ್‌ ಮೂಲಕ ಮಾತುಕತೆಯೂ ನಡೆದಿತ್ತು.

ಜೊತೆಗೆ ಕರಾವಳಿಯಲ್ಲಿ ಪೊಲೀಸ್‌ ಉಪಟಳ ಜಾಸ್ತಿಯಾದ್ರೆ ಜಾಗ ಖಾಲಿ ಮಾಡಿ ಹೊರದೇಶದಲ್ಲಿದ್ದುಕೊಂಡೇ ಇಲ್ಲಿನ ಕ್ರೈಂ ಲೋಕವನ್ನು ಆಪರೇಟ್‌ ಮಾಡುವ ಸಲುವಾಗಿ ಪರಪ್ಪನ ಅಗ್ರಹಾರದಲ್ಲಿ ಈತ ಜೈಲು ಶಿಕ್ಷೆ ಅನುಭವಿಸುತ್ತಿರುವ ವೇಳೆ ಬೆಂಗಳೂರಿನ ಲೋಕಲ್‌ ರೌಡಿ ಶೀಟರ್‌ಗಳೊಂದಿಗೆ ಸಖ್ಯ ಬೆಳೆಸಿ ಶರಣ್‌ ಅಲ್ಲಿನ ಕುಕೃತ್ಯಕ್ಕೆ ಕರಾವಳಿಯ ಹುಡುಗರನ್ನು ಕಳುಹಿಸುವ ಒಪ್ಪಂದ ಕೂಡಾ ನಡೆದಿತ್ತು. ಆದರೆ ಕಾನೂನಿನ ಕೈಗಳು ಉದ್ದ ಎಂಬುವುದು ಮತ್ತೊಮ್ಮೆ ಸಾಬೀತಾಗಿ ಮಂಗಳೂರು ಪೊಲೀಸರು ಕಾಲಿಗೆ ಗುಂಡಾಕಿ ಬಂಧಿಸಿದ್ದಾರೆ.

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ರೇಪಿಸ್ಟ್ ಶರಣ್
ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ಕಳೆದ ವರ್ಷ ಜನವರಿ 7ರಂದು ಶರಣ್ ವಿರುದ್ಧ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ರೌಡಿ ಶರಣ್ ನನ್ನು ಬಂಧಿಸಿದ್ದರು. ಶರಣ್ ಹುಲಿವೇಷ ತರಬೇತಿ ನೀಡುತ್ತಿದ್ದು, ತರಬೇತಿಗಾಗಿ ಬಂದಿದ್ದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ವೊಂದಕ್ಕೆ ಕರೆದೊಯ್ದು, ಅಲ್ಲಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಅತ್ಯಾಚಾರದ ಬಳಿಕ ಬಾಲಕಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಇದು ನಟೋರಿಯಸ್ ಪಾತಕಿ ಆಕಾಶ್ ಭವನ್ ಶರಣ್ ಹಿನ್ನಲೆ..ಇದೀಗ ಗುಂಡೇಟು ತಿಂದು ಮಕಾಡೆ ಮಲಗಿದ್ದಾನೆ..

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments