ರಾಜ್ಯಸುದ್ದಿ

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಲಾಠಿಚಾರ್ಜ್‌, 144 ಸೆಕ್ಷನ್ ಜಾರಿ

ಮಂಡ್ಯ: ಹನುಮ ಧ್ವಜ ಇಳಿಸೋ ಜಿಲ್ಲಾಡಳಿತದ ನಿರ್ಧಾರಕ್ಕೆ ಕೆರಗೋಡು ಗ್ರಾಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕಿಳಿದ ಗ್ರಾಮಸ್ಥರು ಇಂದು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿ ಕೆರಗೋಡು ಹೋಬಳಿ ಬಂದ್ ಮಾಡಿದ್ದರು.

ಜಿಲ್ಲಾಡಳಿತ, ಪೊಲೀಸರ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು, ಹನುಮ ಧ್ವಜ ಇಳಿಸದಂತೆ ಪಟ್ಟು ಹಿಡಿದಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಕೆರಗೋಡು ಹನುಮ ಧ್ವಜದ ಜಾಗದಲ್ಲಿ ಪ್ರತಿಭಟನಾಕಾರರ ಮನವೊಲಿಸಲು ಅಧಿಕಾರಿಗಳು ಯತ್ನಿಸಿದ್ದಾರೆ. ಪೊಲೀಸರ ಭದ್ರತೆ ನಡುವೆ ಎ.ಸಿ ಶಿವಮೂರ್ತಿ ಆಗಮಿಸಿದಾಗ ಅಧಿಕಾರಿಗಳ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಯಾವುದೇ ಕಾರಣಕ್ಕೂ ಹನುಮ ಧ್ವಜ ಇಳಿಸಲು ಕೆರಗೋಡು ಗ್ರಾಮಸ್ಥರು ಒಪ್ಪಿಲ್ಲ.

ಗ್ರಾಮಸ್ಥರ ವಿರೋಧದ ಮಧ್ಯೆಯೂ ಜಿಲ್ಲಾಡಳಿತ ಹನುಮ ಧ್ವಜದ ಜೊತೆ ಧ್ವಜ ಕಂಬ ತೆರವಿಗೆ ಮುಂದಾಗಿದೆ. ಗ್ಯಾಸ್ ಕಟರ್‌ನಲ್ಲಿ ಧ್ವಜಕಂಬ ತೆರವಿಗೆ ಯತ್ನಿಸಲಾಗಿದ್ದು, ಪೊಲೀಸರೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಹನುಮ ಧ್ವಜ ತೆರವಿಗೆ ಯುವಕ, ಮಹಿಳೆಯರು ಕಣ್ಣೀರು ಹಾಕಿದ್ದು, ಪೊಲೀಸರ ವಿರುದ್ದ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದೇ ಪ್ರತಿಭಟನಾ ನಿರತ ಗ್ರಾಮಸ್ಥರು ಕಾಂಗ್ರೆಸ್‌ ಶಾಸಕ ಗಣಿಗ ರವಿಕುಮಾರ್ ಭಾವಚಿತ್ರಕ್ಕೆ ಚಪ್ಪಲಿ ಏಟು ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರಗೋಡಿನಲ್ಲಿ ಪರಿಸ್ಥಿತಿ ಕೈ ಮೀರಿದಾಗ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಬೀಸಿ ಧ್ವಜ ಕಂಬದಿಂದ ಗ್ರಾಮದಿಂದ ದೂರ ಓಡಿಸಿದ್ದು, ಧ್ವಜ ಕಂಬಕ್ಕೆ ಕಟ್ಟಿದ್ದ ಶ್ರೀರಾಮನ ಫ್ಲೆಕ್ಸ್ ತೆರವುಗೊಳಿಸಿದರು. ಪ್ರತಿಭಟನಾಕಾರರನ್ನು ಎಳೆದಾಕಿದ್ದರಿಂದ ಪೊಲೀಸರ ಜೊತೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು.

ಕೆರಗೋಡು ಗ್ರಾಮದಲ್ಲಿ ಲಾಠಿ ಚಾರ್ಜ್ ಮಾಡಿರುವ ಪೊಲೀಸರು ಗುಂಪುಗಟ್ಟದಂತೆ ಎಚ್ಚರಿಕೆ ನೀಡಿದ್ದಾರೆ. ಕೆರಗೋಡು ಗ್ರಾಮದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. 5ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ, ದಯವಿಟ್ಟು ಹೊರಡಿ ಎಂದು ಮನವಿ ಮಾಡಿದ್ದಾರೆ. 2 KSRP, DAR ತುಕಡಿ ಸೇರಿ ನೂರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button