ಶಬರಿಮಲೆ : ಶಬರಿಮಲೆಯಲ್ಲಿ ಸನ್ನಿಧಿ ಮತ್ತು ಇತರ ವೀಕ್ಷಣಾ ಸ್ಥಳಗಳು ಸೇರದಂತೆ ಸಾವಿರಾರು ಅಯ್ಯಪ್ಪ ಭಕ್ತರು ಮಕರಜ್ಯೋತಿಯನ್ನು ವೀಕ್ಷಿಸಿದರು. ಮಕರ ಜ್ಯೋತಿ ಕಾಣುತ್ತಿದ್ದಂತೆ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಕೂಗಿ ಮಕರ ಜ್ಯೋತಿಯ ದರ್ಶನ ಪಡೆದರು. ದೀಪಾರಾಧನೆಯ ನಂತರ 6:30ಕ್ಕೆ ಗರ್ಭಗುಡಿಯ ಬಾಗಿಲು ತೆರೆಯಲಾಯಿತು . ಸಾವಿರಾರು ಮಂದಿ ಕಾಯುತ್ತಿರುವಾಗಲೇ ಪೊನ್ನಂಬಲಮೇಡದಲ್ಲಿ ಮಕರಜ್ಯೋತಿ ಬೆಳಗಿತು. ಭಕ್ತರು ಮಕರಜ್ಯೋತಿಯನ್ನು ಕಣ್ತುಂಬಿಕೊಂಡರು.
ಸೋಮವಾರ ಸಂಜೆ 5 ಗಂಟೆಗೆ ಗರ್ಭಗುಡಿಯ ತೆರೆಯಲಾಯಿತು. ಪಂದಳಂನಿಂದ ಆರಂಭವಾದ ತಿರುವಾಭರಣ ಮೆರವಣಿಗೆಯನ್ನು ದೇವಸ್ವಂ ಅಧಿಕಾರಿಗಳು ಶರಂಕುತ್ತಿಯಲ್ಲಿ ಬರಮಾಡಿಕೊಂಡರು. ಅಯ್ಯಪ್ಪನಿಗೆ ತೊಡುವ ತಿರುವಾಭರಣವನ್ನು ದೇವಸ್ವಂ ಅಧಿಕಾರಿಗಳು ಸ್ವೀಕರಿಸಿದ ನಂತರ ಮೆರವಣಿಗೆಯು ಸನ್ನಿಧಾನಕ್ಕೆ ತೆರಳಿತು. 18 ಮೆಟ್ಟಿಲು ಹತ್ತಿ ಸೋಪಾನಂ ತಲುಪಿದ ಬಳಿಕ ತಂತ್ರಿ ಮತ್ತು ಮೇಲ್ಶಾಂತಿ ಸೇರಿ ತಿರುವಾಭರಣವನ್ನು ಸ್ವೀಕರಿಸಿ ಅಯ್ಯಪ್ಪ ಮೂರ್ತಿಗೆ ತೊಡಿಸುತ್ತಾರೆ. ನಂತರ ದೀಪಾರಾಧನೆ ನಡೆಯಿತು.