ರಾಜ್ಯಸುದ್ದಿ

ಅಂತರ್ಜಾತಿ ವಿವಾಹಕ್ಕೆ ಬಹಿಷ್ಕಾರ ; ಪೊಲೀಸರು ಡೋಂಟ್​ ಕೇರ್‌

ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶಂಕ್ರಪ್ಪ ಬೇನಳ್ಳಿ ಕುಟುಂಬವನ್ನು ಕಳೆದ ಒಂದೂವರೆ ವರ್ಷದಿಂದ ಬಹಿಷ್ಕಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಂಕ್ರಪ್ಪ ಅವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಸಮಾಜದಿಂದ ಬಹಿಷ್ಕಾರ ಹಾಕಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಶೆಂಕ್ರಪ್ಪ ಅವರ ಪುತ್ರ ಲಿಂಗಾಯತ ಸಮಾಜದ ಯುವತಿಯನ್ನು ಮದುವೆಯಾಗಿದ್ದರು. ಹೀಗಾಗಿ ವಾಲ್ಮೀಕಿ ಸಮಾಜದ ನಾಯಕರು ಶೆಂಕ್ರಪ್ಪ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದರು.ಸಮಾಜದ ಯಾವುದೇ ಸಭೆ ಸಮಾರಂಭಗಳಿಗೆ ನಮಗೆ ಆಹ್ವಾನವಿಲ್ಲ. ಸಮಾಜದ ಬೇರೆ ಕುಟುಂಬದವರ ಕಾರ್ಯಕ್ರಮಕ್ಕೆ ಕೂಡಾ ಆಹ್ವಾನ ಇಲ್ಲ. ದಂಡ ಪಾವತಿ ಮಾಡುವ ವರಗೆ ಸಮಾಜದ ಯಾವುದೇ ಕಾರ್ಯಕ್ರಮಕ್ಕೆ ಕರೆಯಬಾರು ಎಂದು ಸಮಾಜದ ಮುಖಂಡರಿಂದ ಆದೇಶವಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂಬ ಆರೋಪ ಸಮಾಜದ ಮುಖಂಡರ ಮೇಲಿದೆ. ಇದನ್ನು ಶೆಂಕ್ರಪ್ಪ ನಿರಾಕರಿಸಿದ್ದರು. ಹೀಗಾಗಿ ಬುಧವಾರ ಸಭೆ ಸೇರಿದ್ದ ಮುಖಂಡರು, 21 ಸಾವಿರ ರೂ. ದಂಡ ನೀಡಬೇಕು ಎಂದು ಸೂಚಿಸಿದ್ದರು. ಹಣ ನೀಡದೇ ಇದ್ದರೆ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಈ ಕಾರಣಕ್ಕೆ ವಾಲ್ಮೀಕಿ ಸಮಾಜದ ಮುಖಂಡರ ವಿರುದ್ಧ ಶೆಂಕ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಬಡಗಿ ವೃತ್ತಿ ಮಾಡುತ್ತಿದ್ದಾರೆ.ಈ ಹಿಂದೆ ಕೂಡಾ ಕೊಪ್ಪಳದಲ್ಲಿ ಅನೇಕ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿತ್ತು ಎಂಬ ಆರೋಪವಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಇದೆ.

Comments (0)

Your email address will not be published. Required fields are marked *

Back to top button