ಹೈದರಾಬಾದ್: ಫೋನ್ ಕದ್ದಾಲಿಕೆ ಹಾಗು ಸಾಕ್ಷಿಗಳ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಮತ್ತಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಹೆಚ್ಚುವರಿ ಡಿಸಿಪಿ ತಿರುಪತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಭುಜಂಗರಾವ್ ಬಂಧಿತರು. ವಿಚಾರಣೆಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳ ಮೇಲೆ ನಿಗಾ ಇಡುವ ಸಂಚು, ಫೋನ್ ಕದ್ದಾಲಿಕೆಯಂತಹ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಬಂಧಿತರಾಗಿರುವ ವಿಶೇಷ ತನಿಖಾ ದಳದ (ಎಸ್ಐಬಿ) ಡಿಎಸ್ಪಿ ಆಗಿದ್ದ ಡಿ.ಪ್ರಣೀತ್ ಕುಮಾರ್ ಅಲಿಯಾಸ್ ಪ್ರಣೀತ್ ರಾವ್ ಮತ್ತು ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ ಮಾರ್ಚ್ 10ರಂದು ಎಸ್ಐಬಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ, ಪ್ರಣೀತ್ ರಾವ್ ಮತ್ತು ಇತರರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪಿತೂರಿ ಆರೋಪದಡಿ ದೂರು ದಾಖಲಿಸಲಾಗಿತ್ತು. ಫೋನ್ ಕದ್ದಾಲಿಕೆ, ಸಾಕ್ಷ್ಯನಾಶ, ನಕಲಿ ಪ್ರೊಫೈಲ್ ತಯಾರಿ, ರಹಸ್ಯ ಅನಧಿಕೃತ ಮತ್ತು ಕಾನೂನುಬಾಹಿರವಾಗಿ ಮೇಲ್ವಿಚಾರಣೆ ಮಾಡಿದ ಆರೋಪದಡಿ ಹಿರಿಯ ಪೊಲೀಸ್ ಅಧಿಕಾರಿ ಪ್ರಣೀತ್ ರಾವ್ ಅವರನ್ನು ಮಾರ್ಚ್ 13ರಂದು ಬಂಧಿಸಲಾಯಿತು. ಬಳಿಕ ಗಂಭೀರ ಆರೋಪ ಎದುರಿಸುತ್ತಿರುವ ರಾವ್ ಅವರನ್ನು ತೆಲಂಗಾಣ ಸರ್ಕಾರ ಅಮಾನತುಗೊಳಿಸಿತು. ಬಂಧಿತ ಅಧಿಕಾರಿ ಹಿಂದಿನ ಬಿಆರ್ಎಸ್ ಸರ್ಕಾರದಲ್ಲಿ ಡಿಎಸ್ಪಿ ಆಗಿದ್ದರು. ನಂತರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿಯಲ್ಲಿ ಡಿಎಸ್ಪಿ ಆಗಿ ಕೆಲಸ ಮಾಡಿದ್ದಾರೆ.