ರಾಜಕೀಯರಾಜ್ಯಸುದ್ದಿ

ಬಿಜೆಪಿಗೆ ಹೋದವರು ವಾಷಿಂಗ್ ಪೌಡರ್ ನಿರ್ಮಾ ಆಗ್ತಾರೆ : ಲಾಡ್ ವ್ಯಂಗ್ಯ

ಹುಬ್ಬಳ್ಳಿ: ಯಾರೇ ಯಾವುದೇ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ, ಅವರು ವಾಷಿಂಗ್ ಪೌಡರ್ ನಿರ್ಮಾ ಆಗಲಿದ್ದಾರೆ. ಶಾಸಕ ಗಾಲಿ‌ ಜನಾರ್ದನ ರೆಡ್ಡಿ ಬಿಜೆಪಿ‌ ಸೇರ್ಪಡೆಗೆ ಸಚಿವ ಸಂತೋಷ ಲಾಡ್ ಲೇವಡಿ ಮಾಡಿದ್ದಾರೆ.

ಇಂದು ಕೆಕೆಪಿ ಪಕ್ಷವನ್ನು ಬಿಜೆಪಿಗೆ ವಿಲೀನಗೊಳಿಸಿ ಬಿಜೆಪಿ ಸೇರ್ಪಡೆಯಾದ ಜನಾರ್ದನ ರೆಡ್ಡಿಯನ್ನು ಈ ಹಿಂದೆ ಪ್ರಧಾನಿಗಳೇ ದೂರ ಇಟ್ಟಿದ್ದರು. ಇದೀಗ ಚುನಾವಣೆಯಲ್ಲಿ ಸರ್ವೇ ರಿಪೋರ್ಟ್ ಬರುತ್ತಿದ್ದಂತೆಯೇ ಬಿಜೆಪಿಯವರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ.‌ ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನಾನು ಲಂಚವನ್ನು ತಿನ್ನಿಸುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಮೋದಿಯವರು ಇದೀಗ ಭ್ರಷ್ಟಾಚಾರ ಆರೋಪ ಹೊತ್ತಿರುವ ರೆಡ್ಡಿಯವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ ಎಂದು ಸಚಿವ ಸಂತೋಷ್​ ಲಾಡ್​ ಹರಿಹಾಯ್ದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಹಿಂದೆ ಶೇ.37 ರಷ್ಟು ಮತಗಳು ಬಂದಿದ್ದವು. ಇದೀಗ ಶೇ.29 ರಷ್ಟು ಬರಬಹುದು. ದೇಶದಾದ್ಯಂತ 200 ಸೀಟುಗಳು ಬಿಜೆಪಿಗೆ ಬರಲಿವೆ. ಇದು ಸರ್ವೇ ಮಾಹಿತಿಯಿಂದಲೇ ಬಹಿರಂಗಗೊಂಡಿದೆ ಎಂದು‌ ಹೇಳಿದರು.‌

ಲೋಕಸಭಾ ಚುನಾವಣೆ ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಮೇಲೆ ನಡೆಯಬೇಕು. ಅದು ಬಿಟ್ಟು ಇದೀಗ ಆರೋಪ ಪ್ರತ್ಯಾರೋಪಗಳ ಮೇಲೆ ನಡೆಯುವಂತಾಗಿದೆ. ಇದು ದುರ್ದೈವ, ವಿಶ್ವ ಗುರು ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರ ಕಾಲದಲ್ಲಿಯೇ ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಹೋಗಿವೆ.‌ ಜಿವೋ ಕಂಪನಿಗೆ ಜಾಹಿರಾತು ಕೊಡುವ ಮೋದಿ ಅವರು ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಗೆ ಜಾಹಿರಾತು ನೀಡಲಿಲ್ಲ. ಉಚಿತವಾಗಿ ಸೇವೆ ನೀಡುವ ಜಿಯೋ ಲಾಭದ ಹಾದಿಯಲ್ಲಿದ್ದರೇ ಬಿಎಸ್ ಎನ್ ಎಲ್ ಯಾಕೆ ನಷ್ಟದಲ್ಲಿದೆ. ಇದರ ಬಗ್ಗೆ ಯಾಕೆ ಯಾರು ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

Comments (0)

Your email address will not be published. Required fields are marked *

Back to top button