ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಸಿನಿಮಾ ಡೈರೆಕ್ಷನ್ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಮಂಜುನಾಥ್ ಮಂಸೋರೆ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಚಿತ್ರಗಳ ಮೂಲಕ ಮತ್ತೊಬ್ಬರಿಗೆ ಮಾರ್ಗದರ್ಶನ ನೀಡಿದ್ದ ಮಂಸೋರೆ ತನ್ನ ಬಾಳ ಸಂಗಾತಿ ಬಾಳಿಗೆ ಕೊಳ್ಳಿ ಇಡೋಕೆ ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಖ್ಯಾತ ಡೈರೆಕ್ಟರ್ಗೆ ಕಾನೂನು ಕಂಟಕ ಕೂಡಾ ಎದುರಾಗಿದೆ.
ಮಂಜುನಾಥ್ ಎಸ್. ಹೌದು ಮಂಜುನಾಥ್ ಯಾರು ಅಂತ ಗೂಗಲ್ ಮಾಡಿದ್ರೆ ನೂರಾರು ಜನರ ಫೋಟೋ ಬರುತ್ತೆ. ಆದ್ರೆ ಮಂಸೋರೆ ಅಂತ ಗೂಗಲ್ ಮಾಡಿದ್ರೆ ಬರೋದು ಇವ್ರ ಫೋಟೋ. ಅವರೇ ಮಂಜುನಾಥ್ ಮಂಸೋರೆ. ಈ ಹೆಸರು ಸ್ಯಾಂಡಲ್ವುಡ್ನಲ್ಲಿ ಭಾರಿ ಫೇಮಸ್ ಮತ್ತು ಗೌರವಿತ ಸ್ಥಾನದಲ್ಲಿದೆ , ಆದ್ರೀಗ ಮಂಸೋರೆಯ ವೈವಾಹಿಕ ಜೀವನ ಪೊಲೀಸ್ ಠಾಣೆಯ ಮೆಟ್ಟಿಲಲ್ಲಿದೆ .
ಅದ್ಬುತ ಸಿನಿಮಾಗಳ ಮೂಲಕ ರಾಜ್ಯ ರಾಷ್ಟ್ರಪ್ರಶಸ್ತಿಗಳನ್ನ ಗೆದ್ದ ನಿರ್ದೇಶಕ ಮಂಸೋರೆ. ಆದ್ರೆ ಈಗ ಅವರ ಹೆಸರು ಚರ್ಚೆ ಯಾಗುತ್ತಿದೆ . ಸಂಸಾರ ಅಂದ ಮೇಲೆ ಜಗಳ ಸರ್ವೇ ಸಾಮಾನ್ಯ. ಗಂಡ ಹೆಂಡರ ಜಗಳ ಉಂಡು ಮಲಗೋತನಕ ಮಾತ್ರ ಎಂಬ ಮಾತಿನಂತೆ ಜೀವನವೂ ಏರು ಪೇರಿನ ಗಾಯನವಾಗಿರುತ್ತದೆ. ಆದ್ರೆ ಮಂಸೋರೆ ದಾಂಪತ್ಯ ಜೀವನ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಪತಿಯ ಧನದಾಹಕ್ಕೆ ಬೇಸತ್ತು ದೂರು ನೀಡಿದ್ದಾರೆ ಪತ್ನಿ ಅಖಿಲಾ
ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನ ನಿರ್ದೇಶಿಸಿರುವ ಮಂಜುನಾಥ್ ಸೋಮಶೇಖರ್ ರೆಡ್ಡಿ. ಚಿತ್ರರಂಗದಲ್ಲಿ ಮಂಸೋರೆ ಎಂದೇ ಪರಿಚಿತರಾಗಿದ್ದಾರೆ.. ಅಲ್ಲದೇ ಮಂಜುನಾಥ್ ನಿರ್ದೇಶನದ ಹಲವು ಚಿತ್ರಗಳಿಗೆ ಸಾಕಷ್ಟು ಅವಾರ್ಡ್ಗಳು ಕೂಡಾ ಬಂದಿವೆ. ಆದ್ರೀಗ ರಾಷ್ಟ್ರಪ್ರಶಸ್ತಿ ವಿಜೇತ ಡೈರೆಕ್ಟರ್ ವಿರುದ್ಧ ಡೌರಿ ಕಿರುಕುಳ ಆರೋಪವನ್ನ ಪತ್ನಿ ಅಖಿಲಾ ಮಾಡಿದ್ದಾರೆ. ಸಿನಿಮಾ ಮಾಡ್ಬೇಕು ಹಣ ತರುವಂತೆ ನನಗೆ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪಿಸಿ ದೂರು ಕೂಡಾ ಕೊಟ್ಟಿದ್ದಾರೆ. ಈ ಸಂಬಂಧ ಮಂಸೋರೆ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪತಿಯ ಧನದಾಹಕ್ಕೆ ಬೇಸತ್ತು ದೂರು ನೀಡಿದ್ದಾಗಿ ಪತ್ನಿ ಅಖಿಲಾ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ಮಂಸೋರೆ ತಾಯಿ ವೆಂಕಟಲಕ್ಷ್ಮಮ್ಮ, ಸಹೋದರಿ ಹೇಮಲತಾ ವಿರುದ್ಧವೂ ಅಖಿಲಾ ದೂರು ನೀಡಿದ್ದಾರೆ.
2021, ಆಗಸ್ಟ್ನಲ್ಲಿ ಮಂಜುನಾಥ್ ಸೋಮಶೇಖರ್ ರೆಡ್ಡಿ ಮತ್ತು ಅಖಿಲಾ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಆ ಪ್ರೀತಿಗೇ ಆರಂಭದಲ್ಲಿ ನಖಾರವಿತ್ತಾದ್ರು ಕೊನೆಗೆ ಮನೆಯವರ ಸಮ್ಮತಿಯೊಂದಿಗೆ ಮದುವೆ ಮೂಲಕ ಸುಖಾಂತ್ಯ ಗೊಂಡಿತ್ತು . ಎರಡು ವರ್ಷಗಳ ಕಾಲ ಸಂಸಾರ ಕೂಡಾ ಮಾಡಿದ್ರು. ಅಲ್ಲದೇ ಅಖಿಲಾ ಕುಟುಂಬಸ್ಥರು ಮೂವತ್ತು ಲಕ್ಷ ಖರ್ಚು ಮಾಡಿ ಮದುವೆಯನ್ನೂ ಮಾಡಿಕೊಟ್ಟಿದ್ರಂತೆ. ಮದುವೆಗೂ ಮುನ್ನ ಬಂಗಾರ ಮತ್ತು ಬಳುವಳಿಯನ್ನೂ ಕೊಟ್ಟಿದ್ರಂತೆ. ಇಷ್ಟೆಲ್ಲಾ ಆದ್ರೂ ಸಿನಿಮಾ ಮಾಡೋಕೆ ಮತ್ತೆ ಹಣ ತರುವಂತೆ ಪೀಡಿಸುತ್ತಿದ್ದಾರೆ ಅಂತ ಅಖಿಲಾ ತಮ್ಮ ಪತಿಯ ವಿರುದ್ಧವೇ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸುಬ್ರಹ್ಮಣ್ಯನಗರ ಠಾಣೆಗೆ ಖುದ್ದು ಹಾಜರಾಗಿ ಹೇಳಿಕೆ ನೀಡಲಿದ್ದಾರೆ .
ಒಟ್ಟಾರೆ ಚಂದನವನದ ನಿರ್ದೇಶಕ ಮಂಜು ಮಂಸೋರೆ ಇದೀಗ ತಮ್ಮ ಸಾಂಸಾರಿಕ ಬದುಕಿಗೆ ತಪ್ಪು ತಪ್ಪಾಗಿ ಡೈರೆಕ್ಷನ್ ಕೊಟ್ರಾ ಎಂಬ ಪ್ರಶ್ನೆ ಎದ್ದಿದೆ, ತನಿಖೆಯ ಬಳಿಕವಷ್ಟೇ ಮಂಸೋರೆ ಮತ್ತೊಂದು ಮುಖ ಗೊತ್ತಾಗಬೇಕಿದೆ.