ಚಿಕ್ಕಬಳ್ಳಾಪುರ,ಜ.26: ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ವಿರೋಧಿ ಮನೋಭಾವದ ಮಾತುಗಳು ಕೆಲವರಿಂದ ಕೇಳಿಬರುತ್ತಿವೆ,ಆ ದಿಸೆಯಲ್ಲಿ ಕೆಲವೆಡೆ ಚರ್ಚೆಯಾಗುತ್ತಿವೆ ಆದ್ದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಸಾರ್ಕಾರ ಇಂದಿನಿಂದ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.
ಸರ್.ಎಂ. ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ನಂತರ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಬ್ರಿಟಿಷರ ಆಳ್ವಿಕೆಯ ಸಂಕೋಲೆಯಲ್ಲಿ ಸಿಲುಕಿದ್ದ ಭಾರತವನ್ನು ಸ್ವತಂತ್ರಗೊಳಿಸಿ, ದೇಶದ ಏಕತೆ, ಅಖಂಡತೆಯನ್ನು ಸ್ಥಾಪಿಸುವಲ್ಲಿ ಶ್ರಮಿಸಿದ ನಮ್ಮ ದೇಶದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ನಾನು ಹೃದಯ ಪೂರ್ವಕ ಅಭಿನಂದನೆಗಳನ್ನು ಹೇಳುತ್ತೇನೆ. ಸ್ವಾತಂತ್ರ್ಯ ಬಂದಾಗ ನಮ್ಮದೇಶದಲ್ಲಿ 562 ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ದೇಶವನ್ನು ಒಂದುಗೂಡಿಸಿ, 1949 ನವೆಂಬರ್ 26 ರಲ್ಲಿ ನಮ್ಮ ಸಂಸತ್ತಿನಲ್ಲಿ ಅಂಗೀಕಾರಗೊಂಡ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೆ ತಂದ ದಿನವಿದು.
ಸಂವಿಧಾನ ಜಾರಿಗೆ ಬಂದು 75ನೇ ವರ್ಷವಿದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನಾವೆಲ್ಲ ನೆನಪಿಸಿಕೊಳ್ಳಲೇಬೇಕಾದ ದಿನ. ಸಂವಿಧಾನವೆ ನಮ್ಮೆಲ್ಲರಿಗೂ ಸರ್ವೋಚ್ಛ ಕಾನೂನು. 75ನೇ ಗಣರಾಜ್ಯೋತ್ಸವದ ಘೋಷವಾಕ್ಯ “ಭಾರತ ಪ್ರಜಾಪ್ರಭುತ್ವದ ತಾಯಿ” ಹಾಗೂ “ವಿಕಸಿತ್ ಭಾರತ್” ಎಂದಾಗಿದೆ. ವಿಕಸಿತ್ ಎಂದರೆ ಅಭಿವೃದ್ಧಿ ಹೊಂದಿದ ಭಾರತ ಎಂದರ್ಥ.ನಮ್ಮದು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿತಗೊಂಡ ಸಂವಿಧಾನ ನಮ್ಮದು.ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯನ್ನು ನಮ್ಮ ಸಂವಿಧಾನವು ಎತ್ತಿ ಹಿಡಿದಿದೆ.ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ ಭ್ರಾತೃತ್ವ ನಮ್ಮ ಸಂವಿಧಾನದ ಮಹತ್ವದ ಮೌಲ್ಯಗಳನ್ನು ಸಾರುತ್ತದೆ.140 ಕೋಟಿ ಜನಸಂಖ್ಯೆಯ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಈ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರಲು ನಮ್ಮ ಶ್ರೇಷ್ಠ ಸಂವಿಧಾನವೆ ಕಾರಣ ಎಂದು ಹೇಳಿದರು.
ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ನೀತಿಯಡಿ ಆರೋಗ್ಯ, ಶಿಕ್ಷಣದ ಜೊತೆಗೆ ಸಮಾನ ಹಕ್ಕನ್ನು ಹಾಗೂ ಪ್ರತಿಯೊಬ್ಬರ ಕರ್ತವ್ಯವನ್ನು ರೂಪಿಸಿದೆ.ಸಂವಿಧಾನವನ್ನು ಗೌರವಿಸುವ ಮತ್ತು ಕರ್ತವ್ಯವನ್ನು ಪಾಲಿಸುವ ಧರ್ಮ ನಮ್ಮೆಲ್ಲರದಾಗಿರಬೇಕು.ಸಾಮಾಜಿಕ ನ್ಯಾಯದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸುಭದ್ರತೆಯನ್ನು ಸಾಧಿಸಲು ಮಹತ್ವ ನೀಡಿದೆ. ವೈವಿದ್ಯತೆಯಲ್ಲಿ ಏಕತೆ ಸಾಧಿಸಿರುವ ದೇಶ ನಮ್ಮದು.ನಮ್ಮ ಸರ್ಕಾರ ಸಂವಿಧಾನಕ್ಕೆ ಬದ್ಧವಾದ ಪ್ರತಿಯೊಬ್ಬರ ಮೂಲಭೂತ ಹಕ್ಕನ್ನು ಕಾಪಾಡುವಲ್ಲಿ ಕಟಿಬದ್ಧವಾಗಿದೆ.ಆದರೆ ಭಾರತದ ಸಮಗ್ರತೆ, ಐಕ್ಯತೆ, ವೈವಿಧ್ಯತೆಯನ್ನು ಕಾಪಾಡುವಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ.
ರಾಜ್ಯದಲ್ಲಿನ ಅನಕ್ಷರತೆ, ಬಡತನ, ಅನಾರೋಗ್ಯ, ಉನ್ನತ ಶಿಕ್ಷಣ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನಮ್ಮ ಸರ್ಕಾರ ಕಲ್ಪಿಸಲು ಕ್ರಮಕೈಗೊಂಡಿದೆ.ಈ ಹಿನ್ನೆಲೆಯಲ್ಲಿ, ನಾವು ಜಾರಿತಂದಿರುವ 05 ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ನಾಡಿನ ಜನ ಸಾಮಾನ್ಯರಿಗೆ ತಲುಪಿವೆ.ಗ್ಯಾರೆಂಟಿ ಯೋಜನೆಗಳು ನಮ್ಮ ನಾಡಿನಜನತೆಗೆ ನೀಡಿರುವ ಅತ್ಯಂತ ಯಶಸ್ವಿ ಕೊಡುಗೆಗಳಾಗಿವೆ.
ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಅನುದಾನ ಕ್ರೋಢಿಕರಣ
ಈಗಿರುವ ಸರ್ ,ಎಂ,ವಿ ಕ್ರೀಡಾಂಗಣವನ್ನ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ನಿರ್ಮಾಣ ಮಾಡಲು 70ಕೋಟಿಯ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಲ್ಲದೆ ಇತರೆ ಮೂಲಗಳಿಂದಲೂ ಅನುದಾನ ಕ್ರೋಢಿಕರಣಕ್ಕೆ ಕ್ರಮವಹಿಸಲಾಗಿದೆ.ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕಾಗಿ 5-12 ಎಕರೆ ಜಮೀನು, ಶಿಡ್ಲಘಟ್ಟದಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕಾಗಿ 9-38 ಎಕರೆ ಜಮೀನು,ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯ ಕಟ್ಟಡ ನಿರ್ಮಾಣಕ್ಕಾಗಿ 9-38 ಎಕರೆ ಜಮೀನು ಮತ್ತು ಚಿಂತಾಮಣಿ ಐ.ಟಿ.ಐ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ 2-20 ಎಕರೆ ಜಮೀನು ನೀಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2023-24 ನೇ ಸಾಲಿಗೆ 33 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನಿಗಧಿಪಡಿಸಲಾಗಿದ್ದು, ಇಲ್ಲಿಯವರೆಗೂ 28.61 ಲಕ್ಷ ಮಾನವ ದಿನಗಳನ್ನು (ಶೇಕಡ 86.69%) ಸೃಜಿನೆ ಮಾಡಲಾಗಿದೆ. ಒಟ್ಟುರೂ 130.58 ಕೋಟಿ ಗಳನ್ನು ಆರ್ಥಿಕವಾಗಿ ವೆಚ್ಚ ಮಾಡಲಾಗಿದೆ.ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 2.21 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. ಇದರಲ್ಲಿ 5.35 ಲಕ್ಷ ಜನರು ನೊಂದಾಯಿಸಿಕೊಂಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ 1999 ಹೊಸ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ.
“ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ” ಅಭಿಯಾನದಡಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಬಳಕೆ, ನಿಷೇಧ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ.
2023-24 ನೇ ಸಾಲಿನಲ್ಲಿ ಕೃಷಿ ಇಲಾಖೆಯ ನರೇಗಾ ಯೋಜನೆಯಡಿ ಒಟ್ಟು 2,05,145 ಮಾನವ ದಿನಗಳ ಗುರಿಯಿತ್ತು, ಬರಗಾಲ ಘೋಷಣೆಯಾಗಿರುವುದರಿಂದ ಸದರಿ ಮಾನವ ದಿನಗಳ ಗುರಿಯನ್ನು 3,50,000 ಮಾನವ ದಿನಗಳಿಗೆ ಪರಿಷ್ಕ್ರತಗೊಳಿಸಲಾಗಿರುತ್ತದೆ. ಕ್ರಿಯಾಯೋಜನೆ ಪ್ರಕಾರ 744.26ಹೆ. ಪ್ರದೇಶದಲ್ಲಿ ಬದು ನಿರ್ಮಾಣ, ಕೃಷಿಹೊಂಡಗಳು, ಎರೆಹುಳ ತೊಟ್ಟಿಗಳು, 163ಹೆ. ಪ್ರದೇಶದಲ್ಲಿ ಖುಷ್ಕಿ ತೋಟಗಾರಿಕೆ ಮತ್ತು 289 ಹೆ. ಪ್ರದೇಶದಲ್ಲಿ ಅರಣ್ಯೀಕರಣ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ 2,24,436 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಜನತೆಯನ್ನು ಒಂದಲ್ಲ ಒಂದು ರೀತಿ ಅಭಿವೃದ್ಧಿಯ ಮುಖ್ಯ ವಾಹಿನಿಗೆ ತರುವ ಪ್ರಯತ್ನವಾಗುತ್ತಿರುವುದು ಸಂತಸದ ವಿಷಯವಾಗಿದೆ. ಈ ರೀತಿಯ ವಾತಾವರಣ ಸೃಷ್ಟಿಸಿರುವ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳನ್ನು ಸಚಿವರು ತಿಳಿಸಿದರು.
ಸಚಿವರು ಭಾಷಣಕ್ಕೂ ಮುನ್ನ ಪಥಸಂಚನದಲ್ಲಿ ಭಾಗವಹಿಸಲು ಬಂದಿದ್ದ 17 ತುಕಡಿಗಳ ಪರಿವೀಕ್ಷಣೆ ನಡೆಸಿದರು. 17 ತುಕಡಿಗಳು ಪಥಸಂಚನವನ್ನ ಲಯಬದ್ದವಾಗಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದವು. ಪಥಸಂಚನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ತುಕಡಿ, ಜಿಲ್ಲಾ ಮಹಿಳಾ ಪೊಲೀಸ್ ತುಕಡಿ,ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ ತಂಡ, ಭಾರತ ಸೇವಾದಳ, ಪಂಚಗಿರಿ ಬೋಧನಾ ಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕ್ವಾಯಟ್ ಕಾರ್ನರ್ ಪ್ರೌಢಶಾಲೆ, ನ್ಯೂಟನ್ ಗ್ರಾಮರ್ ಪ್ರೌಢಶಾಲೆ, ಸಂತ ಜಾನ್ಸ್ ಪ್ರೌಢಶಾಲೆ, ಇಂಡಿಯನ್ ಪಬ್ಲಿಕ್ ಶಾಲೆ, ಪ್ರಕೃತಿ ಶಾಲೆ ,ಬ್ರೈಟ್ ಪ್ರೌಢಶಾಲೆ ಮತ್ತು ಪೊಲೀಸ್ ಬ್ಯಾಂಡ್ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ನಗರದ ಭಾರತಿ ವಿದ್ಯಾ ಸಂಸ್ಥೆ, ಪೂರ್ಣಪ್ರಜ್ಞ ಶಾಲೆ, ಸರ್ಕಾರಿ ಪ್ರೌಢಶಾಲೆ ,ಬಿ ಬಿ ರಸ್ತೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ,ವಾಪ ಸಂದ್ರ,ಹಾಗೂ ಗಿಡ್ನಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಮೂಹಿಕ ನೃತ್ಯ ಪ್ರದರ್ಶನ ನೀಡಿ ಸಾರ್ವಜನಿಕರ ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಂಚನಬಲೆ ಶ್ರಿನಿವಾಸ್,ಸಿ.ಎನ್ ಶಂಕರ ರೆಡ್ಡಿ,ಸತೀಶ್ ಕುಮಾರ್ ಮತ್ತು ಮೋಹನ್ ಶಂಕರ್ ರೆಡ್ಡಿ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ
ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರಕ್ಕೆ ಜಿಲ್ಲಾ ಸರ್ ಎಂ ವಿ ಕ್ರೀಡಾಂಗಣದಲ್ಲಿ ಸಚಿವರು ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿ ದೇಶದಲ್ಲಿ 26/11/1949 ರಂದು ಸಂವಿಧಾನವನ್ನು ಅಂಗೀಕರಿಸಿ 26/01/1950 ರಂದು ಸಂವಿಧಾನ ಜಾರಿಗೆ ಬಂದು 75 ವರ್ಷಗಳು ನಡೆಯುತ್ತಿದ್ದು, ಈ ಶುಭ ಸಂದರ್ಭದಲ್ಲಿ ರಾಜ್ಯಾದ್ಯಾಂತ ಸಂವಿಧಾನ ಜಾಗೃತಿ ಜಾಥದ ಸ್ತಬ್ದಚಿತ್ರ ಮೆರವಣಿಗೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ದಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಸಂವಿಧಾನ ಜಾಗೃತಿ ಜಾಥದ ಸ್ತಬ್ದಚಿತ್ರಕ್ಕೆ ಚಾಲನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ 157 ಗ್ರಾಮ ಪಂಚಾಯಿತಿಗಳ ಹಾಗೂ 06 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿನಿಂದ 23/02/2024 ರವರೆಗೆ ಒಟ್ಟು 28 ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ 24/02/2024 ರಂದು ಬೆಂಗಳೂರಿನಲ್ಲಿ ನಡೆಯುವ ಸಂವಿಧಾನ ಜಾಗೃತಿ ಜಾಥದ ಐಕ್ಯತಾ ಸಮಾವೇಶ ಕಾರ್ಯಕ್ರಮಕ್ಕೆ ತಲುಪಲಿದೆ .ಸರ್ಕಾರದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ
ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರಕ್ಕೆ ಚಾಲನೆ ನೀಡಿದ ನಂತರ ತೋಟಗಾರಿಕೆ ಇಲಾಖೆಯಿಂದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿ,ಹೂವುಗಳಿಂದ ಅಲಂಕರಿಸಿದ ಇಂಡಿಯಾ ಗೇಟ್, ಗಣರಾಜ್ಯೋತ್ಸವದ ಶುಭಾಷಯ ಕೋರುವ ಮಾದರಿ, ಹೂವುಗಳಿಂದ ಅಲಂಕರಿಸಿದ ವೀಣೆ, ಗೃಹೋಪಯೋಗಿ ದಿನಬಳಕೆ, ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆಯಲ್ಲಿ ತೋಟಗಾರಿಕೆ, ಮಾದರಿ ಕೈತೋಟ, ಸೆಲ್ಫೀ ಪಾಯಿಂಟ್ ಗಳು, ಹೂವು ಕುಂಡಗಳ ಜೋಡಣೆ, ವಿವಿಧ ತರಕಾರಿಗಳ ಕೆತ್ತನೆ, ಹೈಡ್ರೋಪೋನಿಕ್ಸ್ ತಾಂತ್ರಿಕತೆ,ಯು ಬಹಳ ಆಕರ್ಷಕವಾಗಿ ಮೂಡಿಬಂದಿವೆ. ನಾಳೆ ಮತ್ತು ನಾಡಿದ್ದು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 8:00 ಗಂಟೆ ವರೆಗೆ ಇಲ್ಲಿ ಪ್ರದರ್ಶನ ಇರಲಿದೆ.
ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ರೈತರಿಗೆ ಉಚಿತ ಪ್ರವೇಶ ಇರುತ್ತದೆ. ವಿವಿಧ ರೀತಿಯ ದೇಶಿಯ ಹಾಗೂ ವಿದೇಶಿಯ ಹೂ, ಹಣ್ಣು ಹಾಗೂ ತರಕಾರಿಗಳ ಪ್ರದರ್ಶನ ಮತ್ತು ಇಲಾಖಾ ಯೋಜನೆಗಳ ಮಾಹಿತಿ ಪ್ರದರ್ಶನ ಇರಲಿದೆ. ಈ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸುವಂತೆ ಮನವಿ ಮಾಡಿದರು.
ವಿವಿಧ ತರಕಾರಿಗಳ ಕೆತ್ತನೆಗಳು ಆಕರ್ಷಣೆಯ ಕೇಂದ್ರ ಬಿಂದು
ವಿವಿಧ ತರಕಾರಿಗಳನ್ನು ಬಳಸಿ ಕೆತ್ತಿದ ಭಗವಾನ್ ಬುದ್ಧ, ಡಾ.ಬಿ ಆರ್ ಅಂಬೇಡ್ಕರ್ ,ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ, ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲನಚಿತ್ರ ನಟ ಶಂಕರ್ ನಾಗ್, ಗಣಪತಿ,ನವಿಲು, ಕಳಶ, ಮಿಕ್ಕಿ ಮೌಸ್, ಈಶ್ವರ ಲಿಂಗ, ಹಂಸ, ಮೀನು, ಮೊಸಳೆ, ಕುದುರೆ ಡೈನೋಸಾರಸ್, ರಾಷ್ಟ್ರೀಯ ತೀರಂಗ ಬಾವುಟ ಇನ್ನೂ ಮುಂತಾದದ ಕಲಾ ಆಕೃತಿಗಳು ಪ್ರದರ್ಶನದಲ್ಲಿ ಜನಮನ ಸೊರೆ ಗೊಂಡವು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ,ಎನ್ ರವೀಂದ್ರ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ್, ಜಿಲ್ಲಾ ಅರಣ್ಯಧಿಕಾರಿ ರಮೇಶ್,ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಆರ್.ಐ ಕಾಸಿಂ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪ ಕಾರ್ಯದರ್ಶಿ ಎನ್ ಭಾಸ್ಕರ್,ಉಪ ವಿಭಾಗಾಧಿಕಾರಿ ಅಶ್ವಿನ್ ,ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಎಂ ಗಾಯಿತ್ರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ,ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ,ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ,ಸಾರ್ವಜನಿಕರು ಉಪಸ್ಥಿತರಿದ್ದರು