ಮಂಡ್ಯ ಜಿಲ್ಲೆ ಬೂದನೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಅದ್ದೂರಿಯಾಗಿ ಬೂದನೂರು ಉತ್ಸವ ನಡೆಲಿದೆ. ಎರಡು ದಿನಗಳ ಹಿಂದೆಯಷ್ಟೆ ಶಾಸಕ ರವಿಕುಮಾರ್ ಗಣಿಗ ಪತ್ರಿಕಾಗೋಷ್ಟಿ ನಡೆಸಿ ಉತ್ಸವ ಪಕ್ಷಾತೀತವಾಗಿ ಎಲ್ಲರೂ ಬಂದು ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಗಳನ್ನ ಪ್ರಸಿದ್ದಿಗೊಳಿಸುವ ಕಾರ್ಯ ಮಾಡ್ಬೇಕು ಅಂತ ಮನವಿ ಮಾಡಿದ್ರು. ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಉತ್ಸವ ನಡೆಯಲಿದ್ದು, ಐತಿಹಾಸಿಕ ದೇವಸ್ಥಾನಗಳಾದ ಕಾಶಿ ವಿಶ್ವನಾಥ, ಹಾಗೂ ಅನಂತಪದ್ಮನಾಭಸ್ವಾಮಿ ದೇವಸ್ಥಾನಗಳು ಉತ್ಸವವೂ ಇಂದಿನಿಂದ ಆರಂಭವಾಗಲಿದೆ.
ಚೋಳ ಅರಸರ ವಾಸ್ತು ಶಿಲ್ಪದ ಆಧಾರದ ಮೇಲೆ ಹೊಸಬೂದನೂರಿನಲ್ಲಿ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕಾಶಿ ವಿಶ್ವನಾಥ ಹಾಗು ಅನಂತಪದ್ಮನಾಭಸ್ವಾಮಿ ಇತಿಹಾಸವನ್ನ ಸಾರುವ ಹಿನ್ನೆಲೆಯಲ್ಲಿ ಬೂದನೂರು ಉತ್ಸವ ಆಯೋಜಿಸಲಾಗಿದೆ. ಪೂರ್ವಿಕರ ಧಾರ್ಮಿಕತೆಯ ಸೊಗಡನ್ನು ರಾಜ್ಯ ಹಾಗೂ ರಾಷ್ಟ್ರ ವ್ಯಾಪಿ ವಿಸ್ತರಿಸೋ ಸಲುವಾಗಿಯೇ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಉತ್ಸವವನ್ನು ಆಚರಿಸಲಾಗುತ್ತಿದೆ.
ಕೇರಳ ರಾಜ್ಯದ ತಿರುವನಂತಪುರ ಹೊರತು ಪಡಿಸಿದ್ರೆ, ದಕ್ಷಿಣ ಭಾರತದಲ್ಲೇ ಮಂಡ್ಯ ಜಿಲ್ಲೆ ಹೊಸಬೂದನೂರಿನಲ್ಲಿ ಮಾತ್ರ ಅನಂತ ಪದ್ಮನಾಭಸ್ವಾಮಿ ದೇಗುಲವಿದ್ದು, ಇಂದಿಗೂ ಹತ್ತು ಅಡಿ ಉದ್ದದ ನಾಗರಹಾವೊಂದು ಇಲ್ಲಿ ವಾಸ್ತವ್ಯ ಹೂಡಿರೋದು ಧಾರ್ಮಿಕತೆ ಬಿಂಬಿಸುತ್ತದೆ. ಇಂತಹ ದೇಗುಲದ ಆವರಣದಲ್ಲಿ ಬೂದನೂರು ಉತ್ಸವ ಹಮ್ಮಿಕೊಂಡಿದ್ದು, ಇಂದು ಸಂಜೆ ಸಾಧುಕೋಕಿಲ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಸಾಮೂಹಿಕ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಮಾರ್ಚ್ 3 ರಂದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇನ್ನು ಇದೇ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ನೀಡಿದ್ದು, ಉತ್ಸವವನ್ನ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.