ಬಿಗ್ ಬಾಸ್ ಸೀಝನ್ ೧೦ ಮುಗಿಯುವ ಹಂತದಲ್ಲಿರುವಾಗ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ,ಪುಣೆಯ ಸಂಸ್ಥೆಯೊಂದರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಒಪ್ಪಂದಕ್ಕಿಂತಲೂ ಕಡಿಮೆ ಡ್ರೋನ್ ನೀಡಿರುವ ಬಗ್ಗೆ ಸಂಸ್ಥೆಯ ಸಿಇಓ, ಪ್ರತಾಪ್ ವಿರುದ್ಧಗಂಭೀರ ಆರೋಪ ಮಾಡಿದ್ದಾರೆ. ಪ್ರತಾಪ್ ನಿಂದಾಗಿ 83 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವರು ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು. ಆದರೆ ನಾಲ್ಕು ಡ್ರೋನ್ಗಳನ್ನಷ್ಟೆ ನೀಡಿರುವ ಪ್ರತಾಪ್, ಉಳಿದ ಡ್ರೋನ್ಗಳನ್ನು ನೀಡಿಲ್ಲವೆಂದು, ಈಗ ನೀಡಿರುವ ನಾಲ್ಕು ಡ್ರೋನ್ಗಳು ಸಹ ಕಳಪೆ ಗುಣಮಟ್ಟದ್ದಾಗಿವೆ ಎಂದು ಸಾರಂಗ್ ಆರೋಪ ಮಾಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಸಾರಂಗ್ ಮಾನೆ, ಕಳೆದ ವರ್ಷ ನಾಸಿಕ್ ಡ್ರೋನ್ ಎಕ್ಸಿಬಿಷನ್ನಲ್ಲಿ ನಾನು ಡ್ರೋನ್ ಪ್ರತಾಪ್ರ ಡ್ರೋನ್ಗಳನ್ನು ನೋಡಿದ್ದೆ. ಬಳಿಕ ಧುಲಿಯಾನಲ್ಲಿ ಅವರ ಸಿಎ ಸಾಗರ್ ಮುಖಾಂತರ ಅವರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಒಟ್ಟು ಎಂಟು ಡ್ರೋನ್ ನೀಡುವಂತೆ ಮಾತುಕತೆ ಮಾಡಿ 35.75 ಲಕ್ಷ ರೂಪಾಯಿ ಹಣ ಪಾವತಿ ಮಾಡಿದೆವು. ಈ ಹಣವನ್ನು ನಾವು ರೈತರಿಂದ ಪಡೆದ ಅಡ್ವಾನ್ಸ್ ಹಾಗೂ ಬ್ಯಾಂಕ್ನಿಂದ ಪಡೆದ ಸಾಲವನ್ನು ಒಟ್ಟು ಮಾಡಿ ನೀಡಿದ್ದೆವು. ಮೊದಲ ಎರಡು ಡ್ರೋನ್ಗಳನ್ನು ನೀಡಲು ಪ್ರತಾಪ್ ಎರಡು ತಿಂಗಳು ತಡ ಮಾಡಿದರು. ಅದಾದ ನಾಲ್ಕು ತಿಂಗಳ ಬಳಿಕ ಇನ್ನೆರಡು ಡ್ರೋನ್ಗಳನ್ನು ನೀಡಿದರು. ಅದಾದ ಬಳಿಕ ಯಾವುದೇ ಡ್ರೋನ್ ನೀಡಿಲ್ಲ. ಇನ್ನೂ ನಾಲ್ಕು ಡ್ರೋನ್ಗಳನ್ನು ಅವರು ನಮಗೆ ನೀಡಬೇಕಿದೆ’ ಎಂದಿದ್ದಾರೆ.
ಈಗ ಪ್ರತಾಪ್ ಕೊಟ್ಟಿರುವ ಡ್ರೋನ್ಗಳು ಉತ್ತಮ ಗುಣಮಟ್ಟ ಹೊಂದಿಲ್ಲ. ಕೆಲವು ಡ್ರೋನ್ಗಳ ಬ್ಯಾಟರಿ ಸರಿಯಿಲ್ಲ. ಒಂದು ಡ್ರೋನ್ ನಲ್ಲಿ ತಪ್ಪು ಜಿಪಿಎಸ್ ತೋರಿಸುತ್ತಿದೆ. ಪ್ರತಾಪ್, ಡ್ರೋನ್ಗಳ ಬಿಡಿ ಭಾಗಗಳನ್ನು ವಿದೇಶಗಳಿಂದ ತರಿಸುತ್ತಾರೆ. ಹಾಗೂ ಅದನ್ನು ತಾವು ಜೋಡಿಸಿ ಮಾರಾಟ ಮಾಡುತ್ತಾರೆ. ಹೀಗೆ ಜೋಡಿಸಲು ಸಹ ಧುಲೆಯಿಂದ ಇಂಟರ್ನ್ಗಳನ್ನು ಕರೆದುಕೊಂಡು ಅವರಿಂದ ಡ್ರೋನ್ನ ಕಾಂಪೋನೆಂಟ್ಸ್ಗಳನ್ನು ಜೋಡಿಸಿ ಮಾರಾಟ ಮಾಡುತ್ತಾರೆ. ಅವರಿಗೆ ಹೆಚ್ಚಿನ ತಂತ್ರಜ್ಞಾನ ಮಾಹಿತಿ ಇದೆ ಎಂದು ನನಗೆ ಅನಿಸುವುದಿಲ್ಲ’ ಎಂದಿದ್ದಾರೆ.
ಪ್ರತಾಪ್ ಅನ್ನು ಹೇಗೆ ನಂಬಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಾರಂಗ್, ‘ನನಗೂ ಏರೋಸ್ಪೇಸ್ನ ಮಾಹಿತಿ ಇರವುದರಿಂದ ಅವರ ಡ್ರೋನ್ಗಳನ್ನು ನೋಡಿದೆ. ಎಲ್ಲವೂ ಹಾರುವ ಸ್ಥಿತಿಯಲ್ಲಿದ್ದವು. ಅಲ್ಲದೆ ಡ್ರೋನ್ನಿಂದ ರೈತರ ಬೆಳೆಗೆ ಕೀಟನಾಶಕ ಸ್ಪ್ರೇ ಮಾಡುತ್ತಿರುವ ವಿಡಿಯೋಗಳನ್ನು ಸಹ ತೋರಿಸಿದರು. ಭೇಟಿ ಮಾಡಿದ್ದಾಗ ಒಮ್ಮೆ, ನೀವು ನನ್ನ ಬಗ್ಗೆ ಗೂಗಲ್ ಮಾಡಿ ನೋಡಿ ಎಂದು ಹೇಳಿದ್ದರು. ಅಂತೆಯೇ ಮಾಡಿದಾಗ ಅವರದ್ದು ವೆರಿಫೈಡ್ ಅಕೌಂಟ್ ಆಗಿತ್ತು. ಗೂಗಲ್ನಲ್ಲಿಯೂ ಅವರ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ನಂಬಿದೆ. ಒಮ್ಮೆ ನಮ್ಮನ್ನು ಬೆಂಗಳೂರಿಗೆ ಆಹ್ವಾನಿಸಿ ಐಶಾರಾಮಿ ಹೋಟೆಲ್ನಲ್ಲಿ ರೂಂ ಬುಕ್ ಮಾಡಿದ್ದರು. ಹೋಟೆಲ್ಗೆ 20 ಸಾವಿರ ಅಡ್ವಾನ್ಸ್ ನೀಡಿ ಎಲ್ಲ ಸವಲತ್ತು ಬಳಸಿಕೊಳ್ಳುವಂತೆ ಹೇಳಿ, ನಮ್ಮ ಮೇಲೆ ಪರೋಕ್ಷ ಪ್ರಭಾವ ಬೀರಿದ್ದರು’ ಎಂದು ಹೇಳಿದ್ದಾರೆ.