ಬೆಂಗಳೂರು : ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನಮ್ಮೆದುರು ಇರುವ ಕಾಲಾವಧಿ ಅತ್ಯಂತ ಕಡಿಮೆ ಇದೆ. ನಾವು ಹಳೆಯದೆಲ್ಲವನ್ನು ಮರೆತು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮನವಿ ಮಾಡಿದರು.
ನಮ್ಮ ವಿರೋಧಿಗಳು ಬಲಿಷ್ಠರಿದ್ದಾರೆ. ನಾವು ಭೂತಕಾಲದ ಎಲ್ಲವನ್ನು ಮರೆಯದೆ ಇದ್ದರೆ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗದು ಎಂದು ಕಿವಿಮಾತು ಹೇಳಿದರು. ಕಾಂಗ್ರೆಸ್ ಪಕ್ಷವು ಹಣಬಲದಿಂದ ಗೆಲ್ಲಲು ಮುಂದಾಗಿದೆ. ಬೇರೆ ರಾಜ್ಯಗಳಿಗೂ ಅದು ಚುನಾವಣೆಗೆ ಹಣದ ನೆರವು ನೀಡುತ್ತಿದೆ ಎಂದು ಗಮನ ಸೆಳೆದ ಅವರು, ಇವೆಲ್ಲವನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ಭಿನ್ನಮತ ದೂರ ಮಾಡಲು ಯಾವುದೇ ನಾಯಕರ ಮನೆಗೆ ಹೋಗಲು ಸಿದ್ಧ ಎಂದು ನುಡಿದರು.
ಎರಡೂ ಪಕ್ಷದವರು ಜೊತೆಯಾಗಿ ಕೆಲಸ ಮಾಡಿದರೆ ಎಲ್ಲ ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಸಾಮಥ್ರ್ಯ ಇದೆ ಎಂದ ಅವರು, ಮೋದಿಯವರು ಮತ್ತು ತಮ್ಮ ನಡುವಿನ ಆತ್ಮೀಯ ಕ್ಷಣಗಳನ್ನು ನೆನಪಿಸಿಕೊಂಡರು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿ ರಾಧಾಮೋಹನ್ದಾಸ್ ಅಗರವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಮಾಜಿ ಸಚಿವ ಜಿ.ಟಿ. ದೇವೇಗೌಡ, ಎರಡೂ ಪಕ್ಷಗಳ ಆಹ್ವಾನಿತ ಮುಖಂಡರು ಭಾಗವಹಿಸಿದ್ದರು.


