
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಭಯ. ಹೀಗಾಗಿ ಅವರ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿ ಬಳಿ ಭಾನುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು, ಮೋದಿ ಅವರು ಕರ್ನಾಟಕದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಕಲಬುರ್ಗಿಯಲ್ಲಿ ಗೆಲ್ಲುವುದೇ ಎಂಬುದಕ್ಕೆ ಉತ್ತರಿಸಿದ ಅವರು ಕಲಬುರ್ಗಿ ಸೇರಿದಂತೆ ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ತಿಳಿಸಿದರು.
20ರಂದು ಎರಡನೇ ಪಟ್ಟಿ ಅಂತಿಮ ಸಾಧ್ಯತೆ:
ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಯಾವಾಗ ಎಂದು ಕೇಳಿದಾಗ, “ಇಂದು ಸಂಜೆ ಮುಂಬೈನಲ್ಲಿ ನಡೆಯಲಿರುವ ಭಾರತ ಜೋಡೋ ನ್ಯಾಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ನಾವು ತೆರಳುತ್ತಿದ್ದೇವೆ. 19ರಂದು ಸಿಇಸಿ ಸಭೆ ನಡೆಯಲಿದ್ದು, 20ರಂದು ಪಟ್ಟಿ ಅಂತಿಮವಾಗಬಹುದು” ಎಂದು ತಿಳಿಸಿದರು.




