ಬೆಂಗಳೂರು: ಇತ್ತೀಚೆಗೆ ನಟಿಯರಿಗೆ ಕಿರುಕುಳ ನೀಡುತ್ತಿರುವ ಆರೋಪಗಳು ಹೆಚ್ಚಾಗುತ್ತಿವೆ.. ಇದೀಗ ಕನ್ನಡ ಕಿರುತೆರೆ ನಟಿಗೆ ಕಿರುಕುಳ ನೀಡಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ.. ಎವಿಆರ್ ಗೂಫ್ ಸಂಸ್ಥಾಪಕ ಆಗಿರುವ ಅರವಿಂದ್ ರೆಡ್ಡಿಯನ್ನು ಆರ್. ಆರ್ ನಗರ ಪೊಲೀಸರು ಬಂಧಿಸಿದ್ದಾರೆ..
2021ರಲ್ಲಿ ಅರವಿಂದ್ ರೆಡ್ಡಿ ನಟಿಗೆ ಕಿರುಕುಳ ನೀಡಿದ್ದ ಎನ್ನುವ ಆರೋಪ ಕೇಳಿ ಬಂದಿದ್ದು, ಕಳೆದ ತಿಂಗಳು 17ರಂದು ಅರವಿಂದ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಶ್ರೀಲಂಕಾದಿಂದ ಬೆಂಗಳೂರಿಗೆ ಬರುವಾಗ ಆರೋಪಿ ಲಾಕ್ ಆಗಿದ್ದಾನೆ. ಆರೋಪಿ ಅರವಿಂದ ವೆಂಕಟೇಶ ರೆಡ್ಡಿ ಉದ್ಯಮಿಯಾಗಿದ್ದು, ಸಿನಿಮಾರಂಗದ ಜೊತೆ ಸಂಪರ್ಕ ಹೊಂದಿದ್ದಾರಂತೆ. ಕನ್ನಡದಲ್ಲಿ 9ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ನಟಿ ಅಭಿನಯಿಸಿದ್ದಾರೆ.
2021ರಲ್ಲಿ ಅರವಿಂದ್ಗೂ ಈ ನಟಿಗೂ ಪರಿಚಯ ಬೆಳೆದಿತ್ತು. 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನೆಗೆ ಬರುವಂತೆ ಅರವಿಂದ್ ನಟಿ ಬಳಿ ಕೇಳಿದ್ದ. ಅಂತೆಯೇ ನಟಿ ತೆರಳಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಅಲ್ಲಿಂದ ಪ್ರೀತಿ-ಕಾಳಜಿಯಿಂದ ಅರವಿಂದ್ ನಡೆದುಕೊಳ್ಳುತ್ತಿದ್ದನಂತೆ. ಆ ಬಳಿಕ 2022ರ ಆಗಸ್ಟ್ನಲ್ಲಿ ಅರವಿಂದ್ ನಟಿಯ ಜೊತೆ ಸಂಪರ್ಕ ಕಳೆದುಕೊಂಡ. ಇದಕ್ಕೆ ಕಾರಣ ನಟಿಗೆ ತಿಳಿದಿರಲಿಲ್ಲ.
ನಂತರ ಅರವಿಂದ್ ಮತ್ತೆ ನಟಿಯ ಜೊತೆ ಸಂಪರ್ಕ ಬೆಳೆಸಿದ್ದೂ ಅಲ್ಲದೆ, ನಟಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಆತನ ಮಾನಸಿಕ ಸ್ಥಿತಿ ಹಾಗೂ ಕುಡಿತದ ಚಟದ ಬಗ್ಗೆ ನಟಿಗೆ ಆಗ ಗೊತ್ತಾಯಿತು. 2024ರಲ್ಲಿ ಒಮ್ಮೆ ಅರವಿಂದ್ ನಟಿಗೆ ಕರೆ ಮಾಡಿದ್ದೂ ಅಲ್ಲದೆ, ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದ. ಇದರಿಂದ ಭಯಗೊಂಡ ನಟಿ ನೂರು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ. ಈ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.


