ಕಲಬುರ್ಗಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಜಾಬ್ ವಿಚಾರವಾಗಿ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ವಿನಃ ಅದು ಅವರೇ ನೀಡಿದ ಹೇಳಿಕೆಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಇರೋದ್ರಿಂದ ನಾವು ಕಾಮೆಂಟ್ ಮಾಡದೆ ಇರೋದು ಒಳ್ಳೆಯದು ಎಂದು ಹೇಳಿದರು. ಹಿಜಾಬ್ ಬ್ಯಾನ್ ಮಾಡೋ ವಿಚಾರ ಸರ್ಕಾರದ ಚಿಂತನೆಯಲ್ಲಿ ಏನಾದರೂ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಅವರು ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ ತೀರ್ಪು ಬರಲಿ ತೀರ್ಮಾನ ಆಗುತ್ತೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯನವರ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ವ್ಯಂಗ್ಯವಾಗಿ ಮಾತನಾಡಿರುವ ಕುರಿತು ಇಂದು ಕಲಬುರ್ಗಿಯಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಾರ್ವಜನಿಕ ಬದುಕಿನಲ್ಲಿ ಇರುವವರು ಬಹಳ ಸಂಯಮದಿಂದ ಮಾತನಾಡೋದನ್ನ ರೂಢಿ ಮಾಡಿಕೊಳ್ಳಬೇಕು. ನಾವು ಲಕ್ಷಾಂತರ ಜನರನ್ನ ಪ್ರತಿನಿಧಿಸುತ್ತೇವೆ. ಆ ಸಂದರ್ಭದಲ್ಲಿ ನಾವು ಮಾದರಿಯಾಗಿರಬೇಕು ಯಾರಾದ್ರೂ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಇನ್ನೂ, ಪಿಎಸ್ಐ ಹಗರಣದ ವಿಚಾರದಲ್ಲಿ ನ್ಯಾಯಮೂರ್ತಿ ವೀರಪ್ಪನವರ ಒಂದು ಆಯೋಗ ಮಾಜಿ ಸಿಎಂ ಕುಮಾರಸ್ವಾಮಿ ಡಾಕ್ಟರ್ ಅಶ್ವಥ್ ನಾರಾಯಣ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿದ ವಿಚಾರಕ್ಕೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ನ್ಯಾಯಮೂರ್ತಿ ವೀರಪ್ಪನವರ ಒಂದು ಆಯೋಗಕ್ಕೆ ಸಿಕ್ಕಂತ ಮಾಹಿತಿ ಆಧಾರದ ಮೇಲೆ ಕೆಲವರಿಗೆ ನೋಟಿಸ್ ಕೊಟ್ಟಿದ್ದಾರೆ. ಮಾಹಿತಿ ಆಧಾರದ ಮೇರೆಗೆ ಯಾರಿಗೆ ಬೇಕಾದರೂ ಅವರು ಕರೆಸ್ತಾರೆ ಅದರ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಪಿಎಸ್ಐ ಹಗರಣದ ಆರೋಪಿಗಳ ಮೇಲೆ ಕೋಕಾ ಕೇಸ್ ಹಾಕಿದ ವಿಚಾರವಾಗಿ ಮಾತನಾಡಿದ ಗೃಹ ಸಚಿವರು ತನಿಖೆ ನಡೆಯುತ್ತಿದೆ ವರದಿ ಬಂದ ಮೇಲೆ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಒಂದು ವೇಳೆ ಕಾನೂನಿನ ಅವಶ್ಯಕತೆ ಇದ್ದರೆ ಜಾರಿಗೆ ತರ್ತೇವೆ ಎಂದು ಹೇಳಿದರು..
ಇನ್ನೂ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಹೇಳಿಕೆಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು. ನಾವು ಹೇಳುವುದಕ್ಕಿಂತ ಹೆಚ್ಚಾಗಿ ಅವರೇ ಹೇಳಿ ನಮ್ಮ ಕೆಲಸ ಹಗುರ ಮಾಡಿದ್ದಾರೆ. ನಮಗೆ ತಪ್ಪು ಕಲ್ಪನೆ ಇತ್ತು. ನಾಲ್ಕು ನಾಲ್ಕು ಸಾವಿರ ಕೋಟಿ ಹಗರಣ ಆಗಿದೆ ಎಂದು ನಾವು ತಿಳಿದಿದ್ದೆವು. ನಮ್ಮದು ತಪ್ಪು ಕಲ್ಪನೆ ಅಂತ ಈಗ ಗೊತ್ತಾಗಿದೆ ಅದು 40,000 ಕೋಟಿ ಆಗಿದೆ ಅಂತ ನಮಗೆ ಗೊತ್ತಿರಲಿಲ್ಲ. ಈಗಾಗಲೇ ಸರ್ಕಾರ ತನಿಖೆ ಮಾಡುತ್ತಿದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯಿಂದ ನಮ್ಮ ತನಿಖೆಗೆ ಶಕ್ತಿ ಬಂದಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.