ಜಾರ್ಖಂಡ್: ಛತ್ರಾ ಜಿಲ್ಲೆಯಲ್ಲಿ ಸಂಭವಿಸಿದ ಏರ್ ಅಂಬುಲೆನ್ಸ್ ಪತನದ ತನಿಖೆ ಈಗ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಲ್ಯಾಕ್ಬಾಕ್ಸ್ ಇಲ್ಲದಿರುವುದು ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಹವಾಮಾನ ವೈಪರೀತ್ಯವೇ ಎಂಬ ನಿಖರ ಮಾಹಿತಿ ಪಡೆಯಲು ಡಿಜಿಟಲ್ ಪುರಾವೆಗಳ ಕೊರತೆ ಎದುರಾಗಿದೆ.
ಸಾಮಾನ್ಯವಾಗಿ ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ 5,700 ಕೆಜಿಗಿಂತ ಕಡಿಮೆ ತೂಕದ ವಿಮಾನಗಳಿಗೆ ಫ್ಲೈಟ್ ಡೇಟಾ ರೆಕಾರ್ಡರ್ಗಳ ಅಗತ್ಯವಿರುವುದಿಲ್ಲ. ಈ ತಾಂತ್ರಿಕ ವಿನಾಯಿತಿಯಿಂದಾಗಿ ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಲ್ಯಾಕ್ಬಾಕ್ಸ್ ಇರಲಿಲ್ಲ. ಹೀಗಾಗಿ ಈಗ ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಂವಹನ ದಾಖಲೆಗಳು, ವಿಮಾನದ ಅವಶೇಷಗಳ ವಿಶ್ಲೇಷಣೆ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.
ವಿಮಾನದಲ್ಲಿದ್ದ ಹವಾಮಾನ ರೇಡಾರ್ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿತ್ತೇ ಅಥವಾ ಅದು ಮುರಿದುಬಿದ್ದ ಕಾರಣ ವಿಮಾನವು ದಾರಿ ತಪ್ಪಿ ಪತನಗೊಂಡಿತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ರೆಡ್ಬರ್ಡ್ ಏರ್ವೇಸ್ ಕಂಪನಿಗೆ ಸೇರಿದ ಈ ಚಾರ್ಟೆಡ್ ವಿಮಾನವು ರಾಂಚಿಯಿಂದ ದೆಹಲಿಗೆ ರೋಗಿಯೊಬ್ಬರನ್ನು ಸಾಗಿಸುತ್ತಿದ್ದಾಗ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಡಿತಗೊಂಡು ಪತನವಾಗಿತ್ತು. ಈ ಭೀಕರ ದುರಂತದಲ್ಲಿ ಪೈಲಟ್ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿ ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ.


