ಕಲಬುರಗಿ: ರಾಜ್ಯದಲ್ಲಿ ಪಂಚಮಸಾಲಿ ಮೀಸಲಾತಿಯ ಕೂಗು ಕೇಳಿ ಬಂದಿತ್ತು. ಈ ಸಂಬಂಧ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆ ಹೋರಟವನ್ನು ಮಾಡಿದ್ದರು. ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧ ಮುತ್ತಿಗೆ ಯತ್ನ ನಡೆಸಿದ ಬಳಿಕ ಪಂಚಮಸಾಲಿ ಹೋರಾಟಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಪಂಚಮಸಾಲಿಗರು ಮತ್ತೆ ಮೀಸಲಾತಿ ಹೋರಾಟಕ್ಕೆ ಮುಂದಾಗಿದ್ದಾರೆ. ಕೂಡಲಸಂಗಮ ಪಂಚಮಸಾಲಿಯ ಜಯಮೃತ್ಯುಂಜಯ ಸ್ವಾಮೀಜಿ ಈ ಮಾಹಿತಿ ನೀಡಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು,’ಪ್ರತಿಜ್ಞಾ ಕ್ರಾಂತಿ ಅಭಿಯಾನ’ ಮೂಲಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಏಪ್ರಿಲ್ 16 ರಂದು ಬಸವಕಲ್ಯಾಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಏಪ್ರಿಲ್ 16 ರಿಂದ 26 ರವರೆಗೆ ಪ್ರತಿ ಹಳ್ಳಿ, ಬೂತ್ಗಳಲ್ಲಿ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಾವು ಶಾಂತಿಯುತವಾಗಿ ಹೋರಾಟ ನಡೆಸಿದ್ದೆವೆ. ಆದರೆ, ಸರ್ಕಾರ ನಮ್ಮ ಮೇಲೆಯೇ ಹಲ್ಲೆ ನಡೆಸಿದೆ ಎಂದು ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಸುವರ್ಣಸೌಧಧ ಬಳಿ ನಮ್ಮ ಸಮಾಜದ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಪಂಚಮಸಾಲಿ ಸಮಾಜವನ್ನು ಒಡೆದಿದ್ದೇವೆಂದು ಕಾಂಗ್ರೆಸ್ ಸರ್ಕಾರ ಅಂದುಕೊಂಡಿದೆ. ಹೀಗೇ ಅಂದುಕೊಂಡರೆ ನಾವೆಂದೂ ಎದೆಗುಂದಲ್ಲ. ನಮ್ಮ ಸಮಾಜ ಒಗ್ಗಟ್ಟಾಗಿದೆ. ಶೆಟ್ಟರ್, ಬೊಮ್ಮಾಯಿ, ಬಿಎಸ್ವೈ ಸಿಎಂ ಇದ್ದಾಗ ಹೋರಾಟ ಮಾಡಿದ್ದೆವು. ಆದರೆ, ನಮ್ಮ ಮೇಲೆ ಈ ರೀತಿ ಹಲ್ಲೆಯಾಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ನಡೆದುಕೊಂಡ ರೀತಿ ಸಮಾಜಕ್ಕೆ ಬಹಳ ನೋವುಂಟು ಮಾಡಿದೆ ಎಂದರು.