ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೋಜು ಮಸ್ತಿ ಮಾಡ್ತಿರೋ ಫೋಟೋ ರಿವೀಲ್ ಪ್ರಕರಣದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ಪಾತ್ರದ ಅನುಮಾನ ವ್ಯಕ್ತವಾಗಿದೆ. ಫೋಟೋ ವೈರಲ್ ಬೆನ್ನಲ್ಲೇ ಈ ಮಾತು ಕೇಳಿಬರ್ತಿದೆ. ಇಬ್ಬರು ಐಪಿಎಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಮತ್ತೆ ಬೆಳಕಿಗೆ ಬಂದಿದೆ. ದರ್ಶನ್ ಫೋಟೋ ಅನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಸಿದ್ದು ಒಬ್ಬ ಹಿರಿಯ ಐಪಿಎಸ್ ಎನ್ನುವ ಗುಸುಗುಸು ಇಲಾಖೆಯಲ್ಲಿ ಕೇಳಿಬರ್ತಿದೆ. ಈ ಐಪಿಎಸ್ ಅಧಿಕಾರಿಯ ಆಪ್ತ ಪೊಲೀಸರು ದರ್ಶನ್ ಫೋಟೋ ವನ್ನು ಮೀಡಿಯಾಗೆ ಹರಿಬಿಟ್ಟಿದ್ದಾರೆ. ಈ ಮೂಲಕ ಜೈಲು ಉಸ್ತುವಾರಿ ವಹಿಸಿಕೊಂಡಿರೋ ಮತ್ತೊಬ್ಬ ಐಪಿಎಸ್ ಅಧಿಕಾರಿಗೆ ಮುಜುಗರ ತರಲು ಮುಂದಾಗಿದ್ದರು. ಆದರೆ ಈ ಘಟನೆ ಇಡೀ ಪೊಲೀಸ್ ಇಲಾಖೆಯ ಮಾನ ಕಳೆದಿದೆ. ಜೈಲಲ್ಲಿ ಹಣ ಕೊಟ್ಟರೆ ಐಶಾರಾಮಿ ಬದುಕು ಸಾಧ್ಯ ಎಂಬ ಸುದ್ದಿ ಫೋಟೋ ಮೂಲಕ ಬಟಾಬಯಲಾಗಿದೆ.
ಈ ಇಬ್ಬರು ಐಪಿಎಸ್ ಅಧಿಕಾರಿಗಳ ಪೈಕಿ ಒಬ್ಬರು ಡಿಜಿಪಿ ದರ್ಜೆಯವರು, ಮತ್ತೊಬ್ಬರು ಎಡಿಜಿಪಿ ರ್ಯಾಂಕ್ ನ ಅಧಿಕಾರಿಯಾಗಿದ್ದಾರೆ. ಈ ಇಬ್ಬರಿಗೂ ದಶಕಗಳಿಂದಲೂ ವೃತ್ತಿವೈಷಮ್ಯವಿದೆ. ಮಹತ್ವದ ಹುದ್ದೆಗಾಗಿ ಇಬ್ಬರ ಮಧ್ಯೆ ಹಲವು ಸಲ ಭಾರಿ ಫೈಟ್ ನಡೆದಿತ್ತು. ಆದರೆ ಒಬ್ಬರಿಗೆ ಹುದ್ದೆ ಒಲಿದು ಬಂದರೆ ಮತ್ತೊಬ್ಬರಿಗೆ ಜೈಲು ಉಸ್ತುವಾರಿ ಸಿಕ್ಕಿತ್ತು. ಈ ವೃತ್ತಿ ವೈಷಮ್ಯ ದರ್ಶನ್ ಫೋಟೋ ವೈರಲ್ ಕೇಸ್ ನಲ್ಲೂ ಮರುಕಳಿಸಿದೆ. ಅಧಿಕಾರಿಗಳ ಈ ವೃತ್ತಿ ಮತ್ಸರ ಇಲಾಖೆಯ ಕೆಲ ಪ್ರಮಾಣಿಕ, ಶಿಸ್ತಿನ ಅಧಿಕಾರಿಗಳ ಬೇಸರಕ್ಕೂ ಕಾರಣವಾಗಿದೆ.