ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗ ಆಟಗಾರರು ತುಂಬಿ ತುಳುಕುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಟೂರ್ನಿಗೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದೆ.ಹೀಗಿರುವಾಗಲೇ ಎಲ್ಲಾ ಫ್ರಾಂಚೈಸಿಗಳು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಈಗಾಗಲೇ ಭರದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ. ಇದೆಲ್ಲದರ ನಡುವೆ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೆಸರಿಗೆ ತಕ್ಕಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗರನ್ನೊಳಗೊಂಡ ತಂಡವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹೌದು, ಐಪಿಎಲ್ ಟೂರ್ನಿಯ ಆರಂಭದಲ್ಲಿ ಆರ್ಸಿಬಿ ತಂಡದಲ್ಲಿ ಕನ್ನಡಿಗರದ್ದೇ ದರ್ಬಾರು ಎನಿಸಿಕೊಂಡಿತ್ತು. ಆರ್ಸಿಬಿ ತಂಡದಲ್ಲಿ ಅನಿಲ್ ಕುಂಬ್ಳೆ, ವಿನಯ್ ಕುಮಾರ್, ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ, ಎಸ್ ಅರವಿಂದ್ ಮುಂತಾದ ಆಟಗಾರರು ಮಿಂಚಿದ್ದರು. ಆದರೆ ಕ್ರಮೇಣ ಆರ್ಸಿಬಿ ತಂಡದಲ್ಲಿ ಕನ್ನಡಿಗರ ಅಂದರೆ ಕರ್ನಾಟಕದ ಆಟಗಾರರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತ್ತು. ಇತ್ತೀಚೆಗಂತೂ ಆರ್ಸಿಬಿ ತಂಡದಲ್ಲಿ ಹೆಸರಿಗಷ್ಟೇ ಒಂದೆರಡು ಆಟಗಾರರನ್ನು ಕರೆದುಕೊಳ್ಳುವುದು ಆ ಬಳಿಕ ಟೂರ್ನಿಯುದ್ದಕ್ಕೂ ಅವರಿಗೆ ಅವಕಾಶ ನೀಡದೇ ಬೆಂಚ್ ಕಾಯಿಸುವಂತೆ ಮಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಆರ್ಸಿಬಿ ತಂಡದಲ್ಲಿ ರಾಜ್ಯದ ಆಟಗಾರರಿಗೆ ಅವಕಾಶ ನೀಡಬೇಕು ಎನ್ನುವ ಆಗ್ರಹ ಜೋರಾಗಿ ಕೇಳಿಬರುತ್ತಿದೆ. ಇದರ ಜತೆಗೆ ಆರ್ಸಿಬಿ ಫ್ರಾಂಚೈಸಿಯು ಕನ್ನಡಿಗರನ್ನು ಹಾಗೂ ಕನ್ನಡವನ್ನು ಕಡೆಗಣಿಸುತ್ತಿದೆ ಎನ್ನುವ ಟೀಕೆ ಸೋಷಿಯಲ್ ಮೀಡಿಯಾಗಳಲ್ಲೂ ಆಗಾಗ ಚರ್ಚೆ ಆಗುತ್ತಲೇ ಬಂದಿದೆ.