ಬೆಂಗಳೂರು: ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ರಚಿಸಲಾಗಿದ್ದ ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿ, ಮಧ್ಯಂತರ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ಹಿನ್ನಲೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಅಂಗೀಕರಿಸಲಾಗಿದೆ.
ಈ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಇಂದಿನ ಸಭೆಯಲ್ಲಿ 36 ವಿಷಯಗಳನ್ನು ಪರೀಶಿಲನೆ ಮಾಡಿ, 34 ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಳಾಗಿದೆ ಎಂದು ತಿಳಿಸಿದರು.
ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚನೆ ಮಾಡಲಾಗಿತ್ತು. ಒಳ ಮೀಸಲಾತಿ ಬಗ್ಗೆ ಮಧ್ಯಂತ ಶಿಫಾರಸು ಮಾಡಲಾಗಿತ್ತು. ಆ ಸಮಿತಿಯು 4 ಶಿಫಾರಸು ಮಾಡಿದೆ ಎಂದರು.
ನ್ಯಾ. ನಾಗಮೋಹನ್ ದಾಸ್ ಸಮಿತಿ ಶಿಫಾರಸುಗಳೇನು?
- SC ಉಪಜಾತಿ ವೈಜ್ಞಾನಿಕ ವರ್ಗೀಕರಣ ಮಾಡಬೇಕು
- ಹೊಸ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹ ಮಾಡಬೇಕು
- ತಂತ್ರಜ್ಞಾನ ಬಳಸಿ 30-40 ದಿನಗಳ ಒಳಗಾಗಿ ಹೊಸ ಸಮೀಕ್ಷೆ
- ಅಗತ್ಯ ಪ್ರಶ್ನಾವಳಿ ಸಿದ್ದಪಡುಸಬೇಕು, ಉನ್ನತಮಟ್ಟದ ಸಮಿತಿ ರಚಿಸಬೇಕು
ಹೊಸ ಸಮೀಕ್ಷೆ ದತ್ತಾಂಶ ಆಧಾರದ ಮೇಲೆ ಎಸ್ಸಿ ಉಪಜಾತಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಬೇಕು. ನಾಗಮೋಹನ್ ದಾಸ್ ಸಮಿತಿಯನ್ನೇ ಮುಂದುವರೆಸಲು ಕ್ಯಾಬಿನೆಟ್ನಲ್ಲಿ ತೀರ್ಮಾನಿಸಲಾಗಿದೆ. 60 ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಸಮಿತಿ ಸದಸ್ಯರು 60 ದಿನದೊಳಗೆ ಸಮೀಕ್ಷೆ ಮಾಡ್ತೇವೆ ಎಂದಿದ್ದಾರೆ. ಅದಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಅಂತ ಇದೆ. ಆದರೆ ಇದರಲ್ಲಿ ಇರುವ ಗೊಂದಲ ಬಗೆಹರಿಸುವ ಉದ್ದೇಶ ಇದೆ. ಇದನ್ನು ಸರಿಪಡಿಸಿಕೊಳ್ಳಲು ಹೆಚ್ಚು ಸಮಯ ಬೇಕಿಲ್ಲ. 60 ದಿನದೊಳಗೆ ನೀಡಬಹುದು. ನಮ್ಮ ಸರ್ಕಾರಿ ಅಧಿಕಾರಿಗಳೇ ಬಳಕೆಯಾಗಲಿದ್ದಾರೆ ಅಂತಾ ಹೆಚ್ಕೆ ಪಾಟೀಲ್ ತಿಳಿಸಿದರು.