ಬೆಂಗಳೂರು: ಡೀಸೆಲ್ ದರ ಏರಿಕೆ ಖಂಡಿಸಿ ಇದೇ ಏಪ್ರಿಲ್ 15 ರಿಂದ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಂದು ರಾಜ್ಯಾದ್ಯಂತ ಎಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಗೂಡ್ಸ್ ವಾಹನಗಳು, ಏರ್ಪೋರ್ಟ್ ಟ್ಯಾಕ್ಸಿಗಳೂ ಸಹ ಸಂಪೂರ್ಣ ಬಂದ್ ಆಗಲಿದೆ
ಈ ಕುರಿತು ಮಾತನಾಡಿರುವ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ, ಡಿಸೇಲ್ ಬೆಲೆ 7 ತಿಂಗಳಲ್ಲಿ 5 ರೂ ಏರಿಕೆಯಾಗಿದೆ. ಇದು ಲಾರಿ ಸೇರಿದಂತೆ ವಾಣಿಜ್ಯ ವಾಹನಗಳ ಮಾಲೀಕರು ನೇಣು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ಏನಾದರೂ ಫ್ರೀ ಕೊಡಲಿ, ಆದರೆ ಹೊಟ್ಟೆ ಮೇಲೆ ಹೊಡೆದು ದರ ಏರಿಕೆ ಮಾಡೋದು ಸರಿಯಲ್ಲ. ಫಿಟ್ನೆಸ್ ಫೀಸ್, ಬಾರ್ಡರ್ ಚೆಕ್ ಪೋಸ್ಟ್, ಡಿಸೇಲ್ ದರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. 14ನೇ ತಾರೀಖು ಅಂಬೇಡ್ಕರ್ ಜಯಂತಿ ರಾತ್ರಿಯಿಂದಲೇ ಹೋರಾಟ ಶುರು ಮಾಡಲಿದ್ದೇವೆ. ಬೇಡಿಕೆ ಈಡೇರುವವರೆಗೆ ಕರ್ನಾಟಕದ ಒಳಗೆ ಯಾರೂ ಬರಲ್ಲ. ಇದಕ್ಕೆ ಪೆಟ್ರೋಲ್ ಮಾಲೀಕರು ಬೆಂಬಲಕೊಟ್ಟಿದ್ದಾರೆ, ಏರ್ಪೋಟ್ ಟ್ಯಾಕ್ಸಿ, ಜಲ್ಲಿ ಮರಳು, ಸೇರಿದಂತೆ ಗೂಡ್ಸ್ ವಾಹನಗಳು ಬಂದ್ ಆಗಲಿವೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳ 9 ಲಕ್ಷ ವಾಹನಗಳು ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.
ಬಸ್ ಟಿಕೆಟ್, ಮೆಟ್ರೋ, ಹಾಲು, ವಿದ್ಯುತ್ ಬಳಿಕ ಡಿಸೇಲ್ ದರ ಏರಿಕೆ ಮಾಡಿ ಕರ್ನಾಟಕ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಲಾರಿ ಮಾಲೀಕರ ಸಂಘ ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ. ಈ ಸಂಬಂಧ ಚಾಮರಾಜಪೇಟೆಯ ಖಾಸಗಿ ಹೋಟೆಲ್ನಲ್ಲಿಂದು ವಾಣಿಜ್ಯ ವಾಹನಗಳ ಮಾಲೀಕರ ಸಂಘ ಸಭೆ ನಡೆಸಿದ್ದು, ಸಭೆಯ ಬಳಿಕ ಹೋರಾಟಕ್ಕೆ ಕರೆ ನೀಡಿದೆ. ಇದೇ ಏಪ್ರಿಲ್ 15ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ