
ಬೆಳಗಾವಿ: ಅಧಿವೇಶನ ಮುಗಿದ ತಕ್ಷಣ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಸಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಿನ್ನೆ ನಡೆದ ಡಿ.ಕೆ.ಶಿವಕುಮಾರ್ ಬಣದ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಪ್ರೀತಿ ವಿಶ್ವಾಸಕ್ಕಾಗಿ ಊಟಕ್ಕೆ ಸೇರುತ್ತೇವೆ. ಅದನ್ನು ಬಣ ರಾಜಕೀಯ, ಶಕ್ತಿ ಪ್ರದರ್ಶನ ಎನ್ನುವುದು ಸರಿಯಲ್ಲ ಎಂದರು.
ಡಿ.ಕೆ .ಶಿವಕುಮಾರ್ ಕಷ್ಟಪಟ್ಟಿದಕ್ಕೆ ಫಲ ಸಿಗುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಆ ಫಲ ಸಿಗುತ್ತದೆ. ನಂಬರ್ ಮುಖ್ಯ ಅಲ್ಲ, ಹೈಕಮಾಂಡ್ನ ನಿರ್ದೇಶನ ಮುಖ್ಯ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೈಕಮಾಂಡ್ ಹೇಳಿದರೆ ಯಾರು ಯಾಕೆ ಕೇಳಲ್ಲ ಸಂಖ್ಯಾಬಲ ಮುಖ್ಯ ಅಲ್ಲ ಎಂದರು.
50-60 ಕಾಂಗ್ರೆಸ್ ಶಾಸಕರು ಡಿನ್ನರ್ಗಾಗಿ ಜೊತೆ ಸೇರಿದ್ದರು. ಶಿವಕುಮಾರ್ ಕರೆದರೆ 224 ಶಾಸಕರೂ ಊಟಕ್ಕೆ ಬರುತ್ತಾರೆ. ಎಲ್ಲರೂ ಡಿಕೆಶಿಗೆ ಆತ್ಮೀಯರೇ, ಎಲ್ಲರೂ ಸ್ನೇಹಿತರಾಗಿದ್ದಾರೆ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಒಪ್ಪಬೇಕು ಎಂದರು.
ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಬೆಳಗಾವಿ ಸ್ನೇಹಿತರು ಊಟಕ್ಕೆ ಕರೆದಿದ್ದರು ಹೋಗಿದ್ದೆವು. ಕುರ್ಚಿ ಕಿತ್ತಾಟವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರಲ್ಲಿ ಯಾವುದೇ ನಂಬರ್ ಗೇಮ್ ಇಲ್ಲ. ಊಟಕ್ಕೆ ಸೇರುವುದು ತಪ್ಪೇ ಎಂದು ಪ್ರಶ್ನಿಸಿದರು.




