ಹುಬ್ಬಳ್ಳಿ: ಪೂಜ್ಯರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಸ್ಕೃತಿ ನನ್ನದಲ್ಲ. ನಾನು ಒಳ್ಳೇಯವರಿಗೆ ಒಳ್ಳೇಯವನು, ದುಷ್ಟರಿಗೆ ದುಷ್ಟ ಇದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ರವಿವಾರ ನಗರದ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರುಸಾವಿರ ಮಠದ ಪೂಜ್ಯರ ಆಶೀರ್ವಾದ ಪಡೆದು, ಸಿದ್ದೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ಸಿದ್ದೇಶ್ವರ ಶಿವಾನುಭವ ಮಂಟಪ, ಯಾತ್ರಿನಿವಾಸ ಸೇರಿದಂತೆ ಅನೇಕ ಕಾರ್ಯ ಮಾಡಿದ್ದು, ಆ ಒಂದು ಕಾರ್ಯಕ್ರಮಕ್ಕೆ ಕರೆಯಲು ಆಗಮಿಸಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದರು.
ಶ್ರೀ ಬಸವ ಜಯಮೃತ್ಯುಂಜಯ ಶ್ರೀ ನನ್ನ ಪರವಾಗಿ ಮಾತನಾಡಿದ್ದರಲ್ಲಿ ಏನು ತಪ್ಪಿದೆ. ಶ್ರೀಗಳು ಹಿಂದೆ ಲಕ್ಷ್ಮೀ ಹೆಬ್ಬಾಳಕರ್, ವಿನಯ ಕುಲಕರ್ಣಿ ಸೇರಿದಂತೆ ಹಲವರ ಪರ ಮಾತನಾಡಿದ್ದಾರೆ. ಯಾವ ಟ್ರಸ್ಟ್ ಅದು, ಟ್ರಸ್ಟಿನಲ್ಲಿರುವವರು ಯಾರು ಎಂಬುದನ್ನು ಅವರ ಬಗ್ಗೆ ಮಾಹಿತಿ ತೆಗೆಯಿರಿ. ತಮ್ಮ ಕುಟುಂಬದ ಟ್ರಸ್ಟ್ ಮಾಡಿಕೊಂಡಿದ್ದಾರೆ ಎಂದರು.
ಎಲ್ಲಿಯವರೆಗೂ ಬಿಜೆಪಿ ಒಂದು ಕುಟುಂಬದಿಂದ ಮುಕ್ತಿ ಹೊಂದುವುದಿಲ್ಲ ಅಲ್ಲಿಯವರೆಗೆ ನಾವು ಪಕ್ಷದಲ್ಲಿ ಹೋಗುವ ಪ್ರಶ್ನೆ ಉದ್ಭವಿಸಲ್ಲ. ಆ ಕುಟುಂಬ ಒಳ್ಳೇಯ ರೀತಿ ಇದಿದ್ದರೆ ನಾನು ಗೌರವ ಕೊಡುತ್ತಿದೆ. ಕುಟುಂಬದಿಂದ ಪಕ್ಷ ಮುಕ್ತವಾದರೆ ಬಿಜೆಪಿಗೆ ಹೋಗುತ್ತೇನೆ. ಮೊದಲು ವಿಜಯೇಂದ್ರ ರಾಜಿನಾಮೆ ನೀಡಲಿ, ನಾನು ರಾಜಿನಾಮೆ ಕೊಡುತ್ತೇನೆ. ಧಮ್ ಇದ್ದರೆ ಕೊಡಲಿ ಚುನಾವಣೆಗೆ ಹೋಗೋಣ. ನೇರವಾಗಿ ಮಾತನಾಡಲಿ ಬೇರೆಯವರ ಜೊತೆ ಮಾತನಾಡಿಸುವುದನ್ನು ಬಿಡಲಿ. ನಾನು ಚುನಾವಣೆಗೆ ಸಿದ್ಧ ಎಂದರು.