ಚನ್ನಪಟ್ಟಣ: ಮೈತ್ರಿ ನಾಯಕರಾದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಗ್ಗೂಡಿ ಎನ್ಡಿಎ ಅಭ್ಯರ್ಥಿಯ ಪರ ನಿನ್ನೆ ಮತಯಾಚನೆ ನಡೆಸಿದ್ದು, ಈ ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಬ್ಬರೂ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿದರು
ರಾಜ್ಯ ಖಜಾನೆ ಸಂಪೂರ್ಣ ಖಾಲಿ ಆಗಿದೆ, ರಾಜ್ಯ ದಿವಾಳಿ ಆಗಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ಇಲ್ಲದಂತಾಗಿದೆ. ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೆಚ್’ಡಿ.ದೇವೇಗೌಡ ಅವರು ಆರೋಪ ಮಾಡಿದರು.
ಕಾಂಗ್ರೆಸ್ನವರೆ ಹಠ ಮಾಡಿ ನನ್ನ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಕೊನೆಗೆ ಅವರೇ ಮೈತ್ರಿ ಸರ್ಕಾರ ಉರುಳಿಸಿದರು. ಕಳೆದ 10 ವರ್ಷಗಳಿಂದ ರೈತರ ಖಾತೆಗೆ ಮೋದಿ ಸರ್ಕಾರ ರೂ.2000 ಜಮಾ ಮಾಡುತ್ತಾ ಬರುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸ್ಥಗಿತಗೊಳಿಸಿದೆ. ಈಗ 5 ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರಲ್ಲಿಯೇ ಗ್ಯಾರಂಟಿಗಳ ಕುರಿತು ಅಪಸ್ವರ ಎದ್ದಿದೆ ಎಂದು ಟೀಕಿಸಿದರು.
ನನಗೆ ನಿಂತು ಮಾತನಾಡುವುದಕ್ಕೆ ಆಗುತ್ತಿಲ್ಲ. ಕಾಲಲ್ಲಿ ನೋವಿದೆ. ಹೀಗಾಗಿ ಕುಳಿತು ಮಾತನಾಡುತ್ತಿದ್ದೇನೆ. ನಾನು ರೈತನ ಮಗ. 90 ವರ್ಷ ವಯಸ್ಸಾಗಿದೆ ನನಗೆ ಸರಿಸಮನಾಗಿ ಎಸ್.ಎಂ.ಕೃಷ್ಣ ಒಬ್ಬರೇ ಇರುವುದು. ಅವರು ಎಲ್ಲೂ ಬರಲ್ಲ. ದೇವೇಗೌಡ ಅವರು ಯಾಕೆ ಬರುತ್ತಾರೆ? ಮೊಮ್ಮಗನ ಗೆಲ್ಲಿಸಲು ಬರುತ್ತಾರೆ. 90 ವಯಸ್ಸಾದರೂ ಬರ್ತಾನಲ್ಲ, ಹುಚ್ಚು ಹಿಡಿದಿದ್ಯಾ ಎಂದು ಎದುರಾಳಿಗಳು ಮಾತನಾಡುತ್ತಿದ್ದಾರೆ. 50 ವರ್ಷಗಳ ಹಿಂದೆ ಚನ್ನಪಟ್ಟಣಕ್ಕೆ ಬಂದು ಕಾಂಗ್ರೆಸ್ ಸೋಲಿಸಿದ ವ್ಯಕ್ತಿ ನಾನು. ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದಾನೆ. ಹಾಗಂತ ನಾನು ಮೊಮ್ಮಗನನ್ನು ಗೆಲ್ಲಿಸಲು ಇಲ್ಲಿಗೆ ಬಂದಿಲ್ಲ. ಪ್ರಾದೇಶಿಕ ಪಕ್ಷ ಉಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಬಂದಿದ್ದೇನೆಂದು ಹೇಳಿದರು.