ಕಲಬುರಗಿ: ನಾವು ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತವಾಗುವುದಿಲ್ಲ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಈ ಕುರಿತು ಮಾತನಾಡಿದ ಅವರು, ವಿಪಕ್ಷಗಳು ಬೇಕಂತಲೇ ಗೊಂದಲ ಸೃಷ್ಟಿ ಮಾಡ್ತಿದ್ದು, ಗ್ಯಾರಂಟಿ ಯೋಜನೆಗಳಿಗೆ ಹೊಸ ಕಂಡಿಷನ್ ಸಹ ಹಾಕುತ್ತಿಲ್ಲವೆಂದು ಸಚಿವರು ಹೇಳಿದರು. ಇನ್ನೂ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಮಾನಿಟರಿಂಗ್ ಕಮಿಟಿ ಮಾಡಲಾಗಿದ್ದು, ಎಲ್ಲದಕ್ಕೂ ತಪ್ಪು ಹುಡುಕುವ ಬಿಜೆಪಿಗೆ ನಾಚಿಕೆಯಾಗಬೇಕೆಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಕಿಡಿ ಕಾರಿದರು.
ಇನ್ನು ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಇಬ್ಬರು ಸಾವಿಗೀಡಾಗಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಜಿಮ್ಸ್ ನಲ್ಲಿ ಆಗಿರೋದಿಲ್ಲ. ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಣ್ಣ ಪುಟ್ಟ ತಪ್ಪು ಆದರು ನಾವು ಸಹಿಸೋದಿಲ್ಲ. ಈ ಬಗ್ಗೆ ನಾನು ತನಿಖೆ ಮಾಡಿಸುತ್ತೇನೆ. ತನಿಖೆ ವೇಳೆ ತಪ್ಪು ಕಂಡು ಬಂದ್ರೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಹಲವು ಕೇಸ್ಗಳಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದರು. ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಮಾಡುತ್ತೇವೆ, ಸಿಎಂ, ಎಐಸಿಸಿ ಅಧ್ಯಕ್ಷರ ಸಮಯ ಕೇಳಿದ್ದೇವೆ ಎಂದು ತಿಳಿಸಿದರು.