ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿನ ಫಾರಂ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ, ಫಿಸೋಥೆರಪಿ ಸಹ ಮಾಡಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿರುವ ಸಂದರ್ಭದಲ್ಲಿ ದರ್ಶನ್ ಬಂಧನ ಆಗಿತ್ತು. ಸಿನಿಮಾದ ಚಿತ್ರೀಕರಣವೂ ನಿಂತು ಹೋಗಿತ್ತು. ಜನವರಿ 15ರ ಬಳಿಕ ಸಿನಿಮಾ ಚಿತ್ರೀಕರಣ ಮರು ಆರಂಭ ಆಗಲಿದೆ ಎನ್ನಲಾಗಿತ್ತು. ಆದರೆ ಅದಕ್ಕೆ ಮುಂಚೆಯೇ ಸಿನಿಮಾ ಕೆಲಸ ಪ್ರಾರಂಭಿಸಿದ್ದಾರೆ ನಟ ದರ್ಶನ್.
ದರ್ಶನ್ ಈ ಹಿಂದೆ ಒಮ್ಮೆ ಹೇಳಿದ್ದಂತೆ, ಅವರು ಜನವರಿ 1 ರಂದು ಅಂದರೆ ಹೊಸ ವರ್ಷದಂದು ಕಡ್ಡಾಯವಾಗಿ ಕೆಲಸ ಮಾಡುತ್ತಾರಂತೆ. ಆ ದಿನ ಅವರು ರಜೆ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲವಂತೆ. ಎಲ್ಲಿ ಆದರೂ ಆಗಲಿ ಚಿತ್ರೀಕರಣದಲ್ಲಿ ಅಥವಾ ಸಿನಿಮಾ ಸಂಬಂಧಿ ಕೆಲಸದಲ್ಲಿ ಕಡ್ಡಾಯವಾಗಿ ತೊಡಗಿಕೊಳ್ಳುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಈ ಬಾರಿ ಅನಾರೋಗ್ಯ ಮತ್ತು ಇತರೆ ಕಾರಣಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಡಬ್ಬಿಂಗ್ ಮಾಡುವ ಮೂಲಕ ತಮ್ಮನ್ನು ತಾವು ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ.
‘ಡೆವಿಲ್’ ಸಿನಿಮಾದ ಚಿತ್ರೀಕರಣ ಜನವರಿ 15ರಿಂದ ಪ್ರಾರಂಭ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಲ ಮೂಲಗಳ ಪ್ರಕಾರ, ಚಿತ್ರತಂಡದವರಿಗೆ ಜನವರಿ 15ಕ್ಕೆ ಶೂಟಿಂಗ್ಗೆ ಹಾಜರಾಗುವಂತೆ ಈಗಾಗಲೇ ಸುದ್ದಿ ಮುಟ್ಟಿಸಲಾಗಿದೆಯಂತೆ. ಇನ್ನು ದರ್ಶನ್ ಸಹ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದು, ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. ಜನವರಿ 15ರ ವೇಳೆಗೆ ಚಿತ್ರೀಕರಣ ಮಾಡುವಷ್ಟರ ಮಟ್ಟಿಗೆ ಗುಣಮುಖರಾಗುವ ಸಾಧ್ಯತೆ ಇದ್ದಂತಿದೆ. ಇನ್ನು ದರ್ಶನ್ಗೆ ನೀಡಲಾಗಿರುವ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಿದ್ದು, ಸುಪ್ರೀಂಕೋರ್ಟ್ನಲ್ಲಿ ವಾದಿಸಲು ವಿಶೇಷ ಪಿಪಿ ಅವರನ್ನು ಸರ್ಕಾರ ಈಗಾಗಲೇ ಹೆಸರಿಸಿದೆ.