#Exclusive Newsರಾಜಕೀಯಸುದ್ದಿ

ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸಿಂಗಲ್‌ ಡಿಜಿಟ್ ದಾಟೋದಿಲ್ಲ- ಸಚಿವ ದಿನೇಶ ಗುಂಡೂರಾವ್

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ಬಿಜೆಪಿ ಈ ಬಾರಿ ಸಿಂಗಲ್ ಡಿಜಿಟ್ ದಾಟೋದಿಲ್ಲ ಎಂದು ಸಚಿವ ದಿನೇಶ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಸತ್ಯ ಮತ್ತು ಸುಳ್ಳು, ಪ್ರೀತಿ ಮತ್ತು ದ್ವೇಷದ ನಡುವಿನ ಚುನಾವಣೆಯಾಗಿದೆ. ಬಿಜೆಪಿ ಕೀಳುಮಟ್ಟದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಕಾಂಗ್ರೆಸ್ ಜೋಡಣೆಗೆ ಮುಂದಾದರೇ, ಬಿಜೆಪಿ ವಿಭಜನೆ ಮಾಡಲು ಮುಂದಾಗಿದೆ. ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಹರಿಹಾಯ್ದರು.

ಚುನಾವಣೆಯಲ್ಲಿ ಬಿಜೆಪಿ ದೇಶದ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿದಿದ್ದೇವು, ಆದರೆ ಬಿಜೆಪಿ ಸುಳ್ಳಿನ ಆಧಾರದ ಮೇಲೆ ದೇಶ ವಿಭಜನೆ ಮಾಡುವ ಪ್ರಚಾರ ಮಾಡುತ್ತಿದೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಯಾವಾಗಲೂ ವಿರೋಧಿ ಪಕ್ಷವಾಗಿದೆ. ಆರ್’ಎಸ್’ಎಸ್ ಮತ್ತು ಬಿಜೆಪಿಯ ಆಂತರಿಕ ಫಿಲಾಸಫಿ ಸಂವಿಧಾನದ ವಿರೋಧಿಯಾಗಿದೆ. ಅವರಿಗೆ ಸಂವಿಧಾನದ ಬಗ್ಗೆ ನಂಬಿಕೆಯಿಲ್ಲ ಎಂದರು.

ಆರ್ ಎಸ್ ಎಸ್ ಸಿದ್ದಾಂತಕ್ಕೂ ಸಂವಿಧಾನ ಸಿದ್ದಾಂತಕ್ಕೂ ವ್ಯತ್ಯಾಸ ಇದೆ. ಬಿಜೆಪಿ ದೇಶದಲ್ಲಿ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ್ದಾರೆ. ಅವರು ಹೇಳೋದು ಒಂದು ಮಾಡೋದು ಒಂದು, ಗುಜರಾತಿನಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಲಾಗಿದೆ. ನಾವು ಧರ್ಮದ ಆಧಾರಿತವಾಗಿ ಮೀಸಲಾತಿ ಕೊಡುತ್ತೇವೆ ಎಂದು ಹೇಳಿಲ್ಲ, ಆದರೆ ಇದನ್ನು ಬಿಜೆಪಿ ತಿರುಚುವ ಕೆಲಸ ಮಾಡಿದೆ. ನಾವು ಶೈಕ್ಷಣಿಕ, ಸಾಮಾಜಿಕವಾಗಿ ಮೀಸಲಾತಿ ಕೊಟ್ಟಿದ್ದೇವೆ ಎಂದರು.

ಪ್ರಜ್ವಲ್ ರೇವಣ್ಣ, ನೇಹಾ ಪ್ರಕರಣದಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಬಿಜೆಪಿ ಈ ಹಿಂದೆ ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಕೊಡಲು ವಿಫಲವಾಯಿತು. ಅವರಿಗೆ ಸರಿಯಾದ ನ್ಯಾಯ ಕೊಡಲಿಲ್ಲ. ಸದ್ಯ ಬಿಜೆಪಿ ಬೆಂಕಿ ಹಚ್ಚಿ ಗಲಾಟೆ ಎಬ್ಬಿಸಿ, ಚುನಾವಣೆ ಗೆಲ್ಲಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಆದರೆ ಅವರ ಸುಳ್ಳು, ಬಣ್ಣ ಬಯಲಾಗಿದೆ. ಇದರಿಂದ ರಾಜ್ಯದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ದಿನೇಶ ಗುಂಡೂರಾವ್ ಹೇಳಿದರು.

 

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

 

Comments (0)

Your email address will not be published. Required fields are marked *

Back to top button