ಯಾದಗಿರಿ : ಏವೂರು ಗ್ರಾಮದಲ್ಲಿ ವಾರದ ಮೊದಲ ದಿನ ಜನರು ಯುಗಾದಿ ಅಮಾವಾಸ್ಯೆ ಎಂದು ಪೂಜೆ ಪುನಸ್ಕಾರದಲ್ಲಿ ತೊಡಗಿದ್ದರು. ನಾಳೆ ಯುಗಾದಿ ಹಬ್ಬವೆಂದು ಮನೆಮಂದಿ ಸಂಭ್ರಮದಲ್ಲಿದ್ದರು. ಆದರೆ ಬೆಳಗಿನ ಜಾವ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ವ್ಯಕ್ತಿಯೊಬ್ಬರ ಬರ್ಬರ ಹತ್ಯೆಯಾಗಿದೆ. ಏವೂರು ಗ್ರಾಮದ ನಿವಾಸಿ ಬಂದೇನವಾಜ್ (40) ಕೊಲೆಯಾದವರು.
ಬಂದೇನವಾಜ್ ಬೆಳಗಿನ ಜಾವ ಬಹಿರ್ದೆಸೆಗೆಂದು ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಹಿಂದಿನಿಂದ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಯುಗಾದಿ ಅಮಾವಾಸ್ಯೆ ದಿನವೇ ಬರ್ಬರ ಹತ್ಯೆ ಕಂಡು ಏವೂರು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬಹಿರ್ದೆಸೆಗೆಂದು ಹೋದ ಬಂದೇನವಾಜ್ ಮನೆಗೆ ವಾಪಸ್ ಆಗಿರಲಿಲ್ಲ.
ಹೀಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ. ಇನ್ನು ಈ ಕೊಲೆಗೆ ನಿಖರ ಕಾರಣ ಏನು? ಹಂತಕರು ಯಾರು ಎಂಬುದು ತಿಳಿದು ಬಂದಿಲ್ಲ.
ಸ್ಥಳೀಯರ ಮಾಹಿತಿ ಪಡೆದು ಎಸ್ ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕೊಲೆಗಾರರಿಗಾಗಿ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ.