ಬೆಂಗಳೂರು :ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಿ.ಸಿ ಮೈಲಾರಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವ ಶೇಕ್ ಲತೀಫ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಿ.ಸಿ ಮೈಲಾರಪ್ಪ ಅವರನ್ನು ಹೈದರಾಬಾದ್ ನ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರಿಗೆ ಬೆದರಿಕೆ ಹಾಕಿದ ಹಾಗೂ ವಂಚಕರ ಪರ ಮಧ್ಯಸ್ತಿಕೆ ವಹಿಸಿದ ಆರೋಪದ ಮೇಲೆ ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸರು ಎರಡು ತಿಂಗಳ ಹಿಂದೆ ಬಂಧಿಸಿದ್ದರು. 48 ಗಂಟೆಗಳಿಗೂ ಹೆಚ್ಚು ಸಮಯ ಕಾರಾಗೃಹದಲ್ಲಿ ಇದ್ದುದ್ದರಿಂದ ನಿಯಮದಂತೆ ಪ್ರಕರಣವನ್ನು ಪರಿಶೀಲಿಸಬೇಕು.. ಆರೋಪಿ ಪ್ರಾಧ್ಯಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಶ್ರೀಕರ್,ಕುಲಸಚಿವರಿಗೆ ನಿರ್ದೇಶನ ನೀಡಿದ್ದರು..
ತೆಲಂಗಾಣದ ನಂದಗಿರಿ ಹಿಲ್ಸ್ನ ರಿಯಲ್ ಎಸ್ಟೇಟ್ ಉದ್ಯಮಿ ಕೆ. ಶಶಿಧರ ರೆಡ್ಡಿ ಅವರು 2023 ಫೆಬ್ರವರಿಯಲ್ಲಿ ನೀಡಿದ್ದ ವಂಚನೆ ಮತ್ತು ಜೀವ ಬೆದರಿಕೆ ದೂರಿನ ಆಧಾರದಲ್ಲಿ ತೆಲಂಗಾಣ ಪೋಲೀಸರು ಮೈಲಾರಪ್ಪ ಅವರನ್ನು ಬಂಧಿಸಿದ್ದರು. ಶಶಿಧರ ರೆಡ್ಡಿ ತಮ್ಮ ಒಡೆತನದ ಶ್ರೀವೆನ್ ಇನ್ ಫ್ರಾ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪ್ರಕರಣದ ಮುಖ್ಯ ಆರೋಪಿ ಸುರೇಂದ್ರ ರೆಡ್ಡಿ ಅವರಿಂದ ಯಲಹಂಕದ ಹೊಸಳ್ಳಿ ಬಳಿ ಇರುವ 11.3 0 ಎಕರೆ ಜಮೀನು ಖರೀದಿಸಿದ್ದರು.
ಮಾತುಕತೆಯ ವೇಳೆ ಮುಂಗಡವಾಗಿ ನೀಡಿದ್ದ 50 ಲಕ್ಷ ರೂಪಾಯಿ ಸೇರಿ, ಒಟ್ಟು 5.35 ಕೋಟಿ ಪಾವತಿಸಿದ್ದರು.. ಸುರೇಂದ್ರ ರೆಡ್ಡಿ ಅವರು ನೀಡಿದ್ದ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎನ್ನುವುದು ದೃಢಪಟ್ಟಿತ್ತು. ಹಣ ವಾಪಸ್ ಕೇಳಿದಾಗ ಮಧ್ಯ ಪ್ರವೇಶಿಸಿದ ಮೈಲಾರಪ್ಪ ಆರೋಪಿಗಳ ಪರವಾಗಿ ತಮ್ಮ ಪ್ರಭಾವ ಬಳಸಿದ್ದರು. ಬೆದರಿಕೆ ಹಾಕಿದ್ದರು ಎಂದು ಅವರನ್ನು ಸೇರಿಸಿ ಪ್ರಕರಣ ದಾಖಲಿಸಲಾಗಿತ್ತು..