ವಿಜಯೇಂದ್ರತಲೆಯಲ್ಲಿ ಕಂಟೆಂಟ್ ಇಲ್ಲ. ವಿಚಾರಗಳ ಮೇಲೆ ಮಾತನಾಡೋಕೆ ಆಗಲ್ಲ. ಅವರ ತಲೆಯಲ್ಲಿರೋದೆಲ್ಲ ಮುಗಿದು ಹೋಗಿದೆ. ಅದಕ್ಕೆ ವೈಯುಕ್ತಿಕ ವಿಷಯ ಮಾತನಾಡುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಶ್ಯೂ ಬಿಟ್ಟಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಮಾತನಾಡುತ್ತಾರೆ. ಮಧುಬಂಗಾರಪ್ಪ ಹೇರ್ಸ್ಟೈಲ್ ಬಗ್ಗೆ ಮಾತನಾಡುತ್ತಾರೆ. ನಾನು ನಾಲ್ಕು ಪ್ರಶ್ನೆ ಕೇಳುತ್ತೇನೆ. ಹೇರ್ಸ್ಟೈಲ್ ಬಗ್ಗೆ ಮಾತನಾಡುತ್ತೀರಲ್ಲ ಸರಿನಾ? ನಿಮಗೆ ಜ್ಞಾನದ ಕೊರತೆ ಇರಬಹುದು. ಇಲ್ಲ ನಿಮಗೆ ಸಲಹೆ ಕೊಡುವುದು ತಪ್ಪಿರಬಹುದು. ಶಿವಮೊಗ್ಗ ಎಂದರೆ ಬಂಗಾರಪ್ಪ, ಯಡಿಯೂರಪ್ಪ ಇಬ್ಬರ ಹೆಸರು ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತಂದಿದ್ದಾರೆ. ಮಕ್ಕಳಿಗೆ ಮೂರು ಅವಕಾಶ ಕೊಟ್ಟಿದ್ದಾರೆ. ಆ ವಿಚಾರಗಳ ಬಗ್ಗೆ ನೀವು ಮಾತನಾಡಿ. ಅದು ಬಿಟ್ಟು ಹೇರ್ಸ್ಟೈಲ್ ಬಗ್ಗೆ ಮಾತನಾಡುತ್ತೀರಲ್ಲ ಎಂದು ಹರಿಹಾಯ್ದರು.
ಈಶ್ವರಪ್ಪ ಬಿಜೆಪಿ ಪಕ್ಷವನ್ನು ಕಟ್ಟಿದವರು, ಯಡಿಯೂರಪ್ಪ ಜೊತೆ ಪಕ್ಷ ಕಟ್ಟಿದವರು. ಅವರನ್ನು ಕರ್ನಾಟಕದ ಅಡ್ವಾಣಿ ಎಂದು ಕರೆಯುತ್ತಿದ್ದರು. ಅಂಥವರನ್ನೇ ನೀವು ಅದ್ವಾನ ಮಾಡಿಬಿಟ್ರಲ್ಲಾ? ಅವರನ್ನು ಯಾಕೆ ಮೂಲೆ ಗುಂಪು ಮಾಡಿದ್ರಿ? ಯತ್ನಾಳ್ ಅವರನ್ನೂ ಮೂಲೆ ಗುಂಪು ಮಾಡಿದ್ರಿ. ನೀವೊಬ್ಬ ರಾಜ್ಯಾಧ್ಯಕ್ಷರು. ಪ್ರತಿದಿನ ಪತ್ರಿಕೆ ಓದಿ. ನಾಲ್ಕು ವಿಚಾರಗಳು ನಿಮಗೆ ಗೊತ್ತಾಗುತ್ತದೆ. ಅದರ ಬಗ್ಗೆ ನೀವು ಮಾತನಾಡಿ. ಅದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡುತ್ತೀರಲ್ಲ. ಬಿಎಸ್ವೈ ಪಕ್ಕಕ್ಕಿಟ್ಟು ನಿಮ್ಮನ್ನು ಯೋಚಿಸಿ. ನೀವು ಅಧ್ಯಕ್ಷರಾಗೋಕೆ ಸಮರ್ಥರೇ? ಶಿಸ್ತಿನ ಪಕ್ಷ ಅಂತ ನೀವು ಹೇಳ್ತೀರಲ್ಲ. ಬಿಜೆಪಿ ಶಿಸ್ತಿನ ಪಕ್ಷವಲ್ಲ, ಕಾಂಗ್ರೆಸ್ ಶಿಸ್ತಿನ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ನಮ್ಮಲ್ಲಿ ಯಾರಾದ್ರೂ ಅನಗತ್ಯ ಮಾತನಾಡಿದರೆ ಕಿತ್ತು ಬಿಸಾಕುತ್ತೇವೆ. ಆದರೆ ಈಶ್ವರಪ್ಪ ಮಾತನಾಡುತ್ತಿದ್ದಾರೆ. ಯತ್ನಾಳ್ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡ್ರಾ? ಅಧ್ಯಕ್ಷರಾಗಿ ಕ್ರಮ ಜರುಗಿಸೋಕೆ ಆಗುತ್ತಾ? ನೀವು ವಿಚಾರಗಳ ಬಗ್ಗೆ ಮಾತನಾಡಿ. ನಾವು ಅದರ ಬಗ್ಗೆ ಕಿತ್ತಾಡೋಣ. ಅದು ಬಿಟ್ಟು ಕಟ್ಟಿಂಗ್ ಬಗ್ಗೆ ಮಾತನಾಡ್ತೀರಲ್ಲ. ಈಶ್ವರಪ್ಪನವರು ಹಿಂದುಳಿದ ವರ್ಗದವರು. ಅಂಥವರನ್ನೂ ನೀವು ಮೂಲೆ ಗುಂಪು ಮಾಡಿದ್ರಿ. ಇದರ ಬಗ್ಗೆ ನೀವು ಮಾತನಾಡಿ ಎಂದರು.