ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ನಿಮ್ಮಲ್ಲಿ ಎಷ್ಟು ಆಸ್ತಿ ಇದೆ, ಎಷ್ಟು ಮನೆಗಳಿವೆ ಎಂದು ವಿಚಾರಿಸಿ ಅವುಗಳಲ್ಲಿ ಒಂದನ್ನು ಕಾಂಗ್ರೆಸ್ ತೆಗೆದುಕೊಂಡು ಕಬಳಿಸುತ್ತದೆ, ಮಾತೆಯರ ಮಾಂಗಲ್ಯದ ಮೇಲೂ ಕಾಂಗ್ರೆಸ್ ಕಣ್ಣಿಟ್ಟಿದ್ದು, ಅಧಿಕಾರಕ್ಕೆ ಬಂದರೆ ಅದನ್ನು ಮುಸ್ಲಿಮರಿಗೆ ನೀಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದರು.
ಇದೀಗ ಪ್ರಧಾನಿ ಮೋದಿ ನೀಡಿದ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ತಪ್ಪು ಮತ್ತು ಬಡವರ ವಿರೋಧಿ ಎಂದು ಹೇಳುವ ಮೂಲಕ ಖಂಡಿಸಿದ್ದಾರೆ. ಇದೀಗ ರಾಹುಲ್ ಗಾಂಧಿಯ ನಿಕಟವರ್ತಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸಾರ್ವಜನಿಕರಿಗೆ ಆಸ್ತಿ ಹಂಚುವ ವಿಷಯವನ್ನು ಒಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಪಿತ್ರೋಡಾ ನೀಡಿರುವ ಈ ಹೇಳಿಕೆಯನ್ನು ಬಿಜೆಪಿ ಮತ್ತೊಮ್ಮೆ ಅಸ್ತ್ರವನ್ನಾಗಿ ಬಳಸಿ ಕಾಂಗ್ರೆಸ್ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ.
ಅಂದಹಾಗೆ ಸ್ಯಾಮ್ ಪಿತ್ರೋಡಾ ಅವರು ಅಮೆರಿಕದ ಉದಾಹರಣೆಯನ್ನು ನೀಡಿದ್ದು, ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಅಮೆರಿಕದಲ್ಲಿ ಯಾರಾದರೂ 100 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿದ್ದು ಅವರು ಸತ್ತರೆ, ಅವರು ತಮ್ಮ ಮಕ್ಕಳಿಗೆ ಕೇವಲ 45%ನಷ್ಟು ಆಸ್ತಿಯನ್ನು ನೀಡಬಹುದು. ಉಳಿದ ಶೇ.55ರಷ್ಟು ಆಸ್ತಿಯನ್ನು ಸರಕಾರ ತೆಗೆದುಕೊಳ್ಳುತ್ತದೆ. ನಂತರ ಬಡವರಿಗೆ ಹಂಚುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು ಎಂದು ಸ್ಯಾಮ್ ಪಿತ್ರೋಡಾ ಕರೆದಿದ್ದಾರೆ.
ಭಾರತದಲ್ಲಿ ಯಾರಾದರೂ 10 ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ಮರಣದ ನಂತರ ಅವರು ಸಂಪೂರ್ಣ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಟ್ಟುಕೊಡುತ್ತಾರೆ. ಮತ್ತು ಸಾರ್ವಜನಿಕರು, ಬಡವರು ಅದರಿಂದ ಏನನ್ನೂ ಪಡೆಯುವುದಿಲ್ಲ.