Editorial

ಸಂಪಾದಕೀಯ…

ಓದುಗರೇ ನಮಸ್ಕಾರ. ಸಿಎಂ ಸಚಿವಾಲಯದ ಅಧಿಕಾರಿಗಳ ಮೂಲಕ RSS ತನ್ನ ಬೇಳೆ ಬೇಯಿಸಿಕೊಳ್ತಿದೆ ಎಂಬ ಟೀಕೆ ಚಾಲ್ತಿಯಲ್ಲಿದೆ. ಇದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ಕಾಂಗ್ರೆಸ್ ಸರ್ಕಾರದ ಮೇಲೆ ಆರ್ ಎಸ್ ಎಸ್ ಪ್ರಭಾವ ಬೀರಬಾರದಾ.? ಯಾರಷ್ಟೇ ಪ್ರಭಾವ ಬೀರಬೇಕು ಅನ್ನೋದು ಪ್ರಶ್ನೆ.

ನನಗನಿಸುತ್ತೆ ಕಾಂಗ್ರೆಸ್ ನ ಸಿಎಂ ಕಚೇರಿ ಮೇಲೆ RSS ಪ್ರಭಾವ ಇರಬೇಕು. ಅಷ್ಟೇ ಅಲ್ಲ ಬಿಎಸ್ಪಿ, ಕಮ್ಯುನಿಸ್ಟ್ ಪ್ರಭಾವವೂ ಕೆಲಸ ಮಾಡಬೇಕು. ಬಿಜೆಪಿಯ ಸಿಎಂ ಕಚೇರಿ ಮೇಲೆ DSS, ಸೇವಾದಳದ ಪ್ರಭಾವವೂ ಇರಬೇಕು. ಅದು ಪ್ರಜಾತಂತ್ರದ ಜೀವಂತಿಕೆಯ ಲಕ್ಷಣ.

ಸರ್ಕಾರದಲ್ಲಿ ಆರ್ ಎಸ್ ಎಸ್ ಮಾತು ನಡೆಯುತ್ತೆ ಎಂದಾದರೆ ಸಿದ್ದು ಟೀಮ್ ನ ಹೃದಯ ವೈಶಾಲ್ಯ ಮೆಚ್ಚುವಂತದ್ದು. ಆದರೆ ಉಳಿದ ಐಡಿಯಾಲಜಿ ಗಳ ಜನರನ್ನು ಸಮನಾಗಿ ಕಾಣುವುದು ಕೂಡ ಅವರ ಕರ್ತವ್ಯ. ಕೆಲ ಧ್ವನಿಗಳ ಉಪೇಕ್ಷೆಯೇ ಸದ್ಯದ ಟೀಕೆಗೆ ಕಾರಣವಾಗಿರುವ ಸಾಧ್ಯತೆಯಿದೆ.

ಯಾರೋ ಒಬ್ಬರು ಜೀ ಏನೋ ಒಂದು ಕೆಲಸ ಹೇಳಿ ಮಾಡಿಸಿಕೊಂಡಿರಬಹುದು, ಆದರೆ ಸಿದ್ದು ಟೀಮ್ ಗೆ ಇನ್ಫಿಲ್ಟರ್ ಆಗಿ ಹೊಟ್ಟೆ ಹೊರೆಯುವ ತುರ್ತು ಆರ್ ಎಸ್ ಎಸ್ ಗೆ ಇದೆ ಎಂದು ಅನಿಸುತ್ತಿಲ್ಲ.

ಎಲೆಕ್ಷನ್ ವೇಳೆ ಎಲ್ಲ ಪಕ್ಷಗಳು ತಮ್ಮ ಐಡಿಯಾಲಜಿ ಜನರ ಮುಂದಿಡುತ್ತವೆ. ತಮಗಿಷ್ಟ ಬಂದವರನ್ನು ಜನ ಗೆಲ್ಲಿಸುತ್ತಾರೆ. ಗೆದ್ದನಂತರ ತಮಗೆ ಮತ ಹಾಕಿದ ಹಾಕದ ಎಲ್ಲರಿಗೂ ಅದು ಸರ್ಕಾರವೇ. ಬ್ಯೂರೋಕ್ರಸಿಯ ನಿಯಮಗಳಲ್ಲಿ ತಾರತಮ್ಯಕ್ಕೆ ಅವಕಾಶ ಇಲ್ಲ. ಒಂದು ಪೊಲಿಟಿಕಲ್ ಐಡಿಯಾಲಜಿಯನ್ನು ಜನರ ಮುಂದಿಟ್ಟು ಅಧಿಕಾರ ಹಿಡಿದಾಕ್ಷಣ ಮತ್ತೊಂದು ಐಡಿಯಾಲಜಿ ಜನರನ್ನು ವೈರಿಗಳಂತೆ ಕಾಣುವ, ಪರಿಭಾವಿಸುವ ಪರಿಯೇ ಅನಾರೋಗ್ಯದ ಸಂಕೇತ. ಇದನ್ನು ಪ್ರಿಯಾಂಕ್, ಹರಿಪ್ರಸಾದ್ ರ ಪಡೆಗಳು, ಸುರೇಶ್ ಕುಮಾರ್ , ಹರೀಶ್ ಪೂಂಜ ಪಟಾಲಂ ಗಳಿಗೆ ಅರ್ಥವಾಗಬೇಕು. ತಂತಮ್ಮ ಹೈಕಮಾಂಡ್ ಮೆಚ್ಚಿಸಲು ಇವ್ರಾಡೋ ಮಾತಿಂದ ಜನಕ್ಕೆ ತೂತುಕಾಸಿನ ಪ್ರಯೋಜನವೂ ಇಲ್ಲ.

ಯಾವುದೇ ಸರ್ಕಾರವಿರಲಿ ಒಂದು ಐಡಿಯಾಲಜಿಯ ಜನರನ್ನೇ ಓಲೈಕೆ ಮಾಡದೆ, ಎಲ್ಲಾ ಧ್ವನಿಗಳನ್ನು ಸಮಾನವಾಗಿ ಕೇಳುವುದು ಅಗತ್ಯ. ಸದ್ಯಕ್ಕೆ ನಡೆಯುತ್ತಿರುವ ರಾಯಲ್ ಸಲ್ಯೂಟ್ ವಿವಾದ, ಆರ್ ಎಸ್ ಎಸ್ ಇನ್ಫಿಲ್ಟರ್ ವಾದ, ಪತ್ರಕರ್ತರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ವಿವಾದಗಳೆಲ್ಲವೂ ಸಿಎಂ ಕಚೇರಿ ಅಧಿಕಾರದ ಹಬ್ಬದ ಮಧ್ಯೆಯೂ ಲಿಬರಲ್ ಆಗಿ ಸಕ್ರಿಯವಾಗಿದೆ ಎಂಬುದರ ಸೂಚಕ. ಎಲ್ಲರನ್ನು ಆಲಿಸಿ, ಅರ್ಹರನ್ನು ಸ್ವೀಕರಿಸಿ, ಯಾರನ್ನೂ ವೃಥಾ ನೋಯಿಸದೆ ಜನರ ಹಿತಕ್ಕಾಗಿ ಕೆಲಸ ಮಾಡುವುದು ನಿಜವಾದ ಡೆಮಾಕ್ರಸಿ.ಸಿಎಂ ಕಚೇರಿಗೆ RSS… ಮೋದಿ ಮನೆಗೆ ಓವೈಸಿ..ಪತ್ರಕರ್ತರ ಮನೆಗೆ CM ಹೋಗ್ಲಿ ಬಿಡ್ರಿ..!

Comments (0)

Your email address will not be published. Required fields are marked *

Back to top button